ಕೆ.ಆರ್.ನಗರ- ಜೆಡಿಎಸ್ ನಿಂದ ಬಿಜೆಪಿಗೆ ಹೋಗಿರುವ ಎಮ್ ಎಲ್ ಸಿ ಹೆಚ್.ವಿಶ್ವನಾಥ್, ಕಾಂಗ್ರೆಸ್ ಕಡೆ ಮುಖ ಮಾಡ್ತಾರಾ ಅನ್ನೋ ಚರ್ಚೆ ಆರಂಭವಾಗಿದೆ. ಇದಕ್ಕೆ ಪೂರಕವಾಗುವಂತೆ ಇದೀಗ ಅವರು ಮೈಸೂರಿನಲ್ಲಿ ನೀಡಿರುವ ಹೇಳಿಕೆಯೊಂದು ಅನುಮಾನಕ್ಕೆ ಕಾರಣವಾಗಿದೆ.
ಹೌದು, ಕಾಂಗ್ರೆಸ್ ಸೇರ್ತೀರಾ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿರುವ ವಿಶ್ವನಾಥ್, ನನ್ನ ಇಷ್ಟು ವರ್ಷದ ರಾಜಕಾರಣದಲ್ಲಿ ಅನೇಕ ಬದಲಾವಣೆಗಳು ಆಗಿವೆ. ಕಾಲ ಚಕ್ರದಲ್ಲಿ ಈಗಿನ ರಾಜಕಾರಣ ಏನು ಬೇಕಾದರೂ ಆಗಬಹುದು ಎಂದು ಹೇಳಿದ್ದಾರೆ. ಜೊತೆಗೆ ಇವತ್ತಿನ ರಾಜಕಾರಣ ಹೀಗೆ ಇರುತ್ತದೆ ಎಂದು ಹೇಳಲು ಸಾಧ್ಯವಿಲ್ಲ ಎಂದಿದ್ದಾರೆ. ಇನ್ನು ಮೂರು ಪಕ್ಷಗಳು ಮುಳುಗುವ ಹಡಗುಗಳಲ್ಲ. ಅವು ತೇಲುವ ಹಡುಗುಗಳೇ ಎಂದು ಹೇಳಿದ್ದಾರೆ.
ಇನ್ನು ರಾಹುಲ್ ಗಾಂಧಿ ಕುರಿತಂತೆ ಮಾತನಾಡಿರುವ ಅವರು, ಜೋಡೋ ಕಾರ್ಯಕ್ರಮದಿಂದ ಕಾಂಗ್ರೆಸ್ ಗೆ ಬಲಬಂದಂತಾಗಿದೆ. ಅನೇಕ ವಿರೋಧಿಗಳು ರಾಹುಲ್ ಬಗ್ಗೆ ಮಾತನಾಡಿದ್ದರು. ಜೋಡೋ ಮೂಲಕ ಅವರಿಗೆ ಉತ್ತರ ನೀಡುವುದರ ಜೊತೆಗೆ ಮತ್ತೊಬ್ಬ ಪರ್ಯಾಯ ನಾಯಕ ದೇಶದಲ್ಲಿ ಇದ್ದಾನೆ ಎಂಬುದನ್ನ ತೋರಿಸಿದ್ದಾರೆ ಎಂದು ಹೇಳಿದರು.