ದಾವಣಗೆರೆಯಲ್ಲಿ ಇಂದು ನಡೆಯಲಿರುವ ಸಿದ್ದರಾಮಯ್ಯ ಜನ್ಮದಿನದ ಅಮೃತ ಮಹೋತ್ಸವ ಕಾರ್ಯಕ್ರಮಕ್ಕೆ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರು ಗೈರು ಹಾಜರಾಗಲಿದ್ದಾರೆ.
ಕಾಂಗ್ರೆಸ್ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ಮಾಜಿ ಕೇಂದ್ರ ಸಚಿವ ಕೆ.ಹೆಚ್. ಮುನಿಯಪ್ಪ ಅವರು ಗೈರುಹಾಜರಾಗಲಿದ್ದಾರೆ.
ಮುನಿಯಪ್ಪ ಅವರು ಕಾರ್ಯಕ್ರಮದಿಂದ ಅಂತರ ಕಾಯ್ದುಕೊಂಡಿದ್ದಾರೆ. ಕೋಲಾರ ರಾಜಕೀಯಕ್ಕೆ ಸಂಬಂಧಿಸಿದಂತೆ ಮುನಿಯಪ್ಪ ಮುನಿಸಿಕೊಂಡಿದ್ದಾರೆನ್ನಲಾಗಿದೆ. ಸಿದ್ದರಾಮಯ್ಯ ಮತ್ತು ರಮೇಶ್ ಕುಮಾರ್ ಅವರ ವಿರುದ್ಧ ಮುನಿಯಪ್ಪ ಮುನಿಸಿಕೊಂಡಿದ್ದಾರೆ. ಕೊತ್ತೂರು ಮಂಜುನಾಥ್ ಸೇರಿದಂತೆ ಇತರರ ಪಕ್ಷ ಸೇರ್ಪಡೆ ವೇಳೆಯಲ್ಲಿ ತಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದ ಹಿನ್ನೆಲೆಯಲ್ಲಿ ಮುನಿಯಪ್ಪ ಅಸಮಾಧಾನಗೊಂಡಿದ್ದಾರೆ. ಈ ಕಾರಣದಿಂದ ಪೊಲಿಟಿಕಲ್ ಅಫೈರ್ ಕಮಿಟಿ ಸಭೆಯಿಂದಲೂ ಮುನಿಯಪ್ಪ ದೂರ ಉಳಿದಿದ್ದಾರೆ.
ಎಂ.ಸಿ. ಸುಧಾಕರ್ ಸೇರ್ಪಡೆಗೊ ಮುನಿಯಪ್ಪ ಅವರನ್ನು ಸಂಪರ್ಕಿಸಿರಲಿಲ್ಲ. ದೆಹಲಿಯಲ್ಲಿ ರಾಹುಲ್ ಗಾಂಧಿ ಸಮ್ಮುಖದಲ್ಲಿ ರಮೇಶ್ ಕುಮಾರ್ ಮುಂದಾಳತ್ವದಲ್ಲಿ ಎಂ.ಸಿ. ಸುಧಾಕರ್ ಮತ್ತು ಕೊತ್ತೂರು ಮಂಜುನಾಥ್ ಕಾಂಗ್ರೆಸ್ ಗೆ ಸೇರ್ಪಡೆಯಾಗಿದ್ದರು. ಹೀಗಾಗಿ ರಮೇಶ್ ಕುಮಾರ್ ವಿರುದ್ಧ ಮುನಿಯಪ್ಪ ಕಿಡಿ ಕಾರಿದ್ದರು. ಇತ್ತೀಚೆಗಷ್ಟೇ ಇಬ್ಬರ ಬೆಂಬಲಿಗರು ಪರಸ್ಪರ ಕೈ ಮಿಲಾಯಿಸಿದ್ದರು. ಘಟನೆಯ ಬಳಿಕ ಸಿದ್ದರಾಮಯ್ಯರವರಿಂದ ಮುನಿಯಪ್ಪ ಇನ್ನಷ್ಟು ದೂರವಾಗಿದ್ದಾರೆ. ಹೀಗಾಗಿ ದಾವಣಗೆರೆಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಅವರು ಭಾಗಿಯಾಗುವುದಿಲ್ಲವೆನ್ನಲಾಗಿದೆ.
ದೆಹಲಿಯ ನ್ಯಾಷನಲ್ ಹೆರಾಲ್ಡ್ ಕಚೇರಿ ಮೇಲೆ ಇಡಿ ದಾಳಿ ಹಿನ್ನೆಲೆಯಲ್ಲಿ ಇಂದು ಸಿದ್ದರಾಮಯ್ಯ ಅಮೃತ ಮಹೋತ್ಸವ ಕಾರ್ಯಕ್ರಮಕ್ಕೆ ರಾಜ್ಯಸಭೆ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಬರುವುದಿಲ್ಲ. ಇಡಿ ದಾಳಿ ಹಿನ್ನೆಲೆಯಲ್ಲಿ ದೆಹಲಿಯಲ್ಲಿರುವ ಖರ್ಗೆ ದಾವಣಗೆರೆ ಕಾರ್ಯಕ್ರಮದಲ್ಲಿ ಭಾಗವಹಿಸುವುದಿಲ್ಲ. ಖರ್ಗೆ ಅವರು ನ್ಯಾಷನಲ್ ಹೆರಾಲ್ಡ್ ಮಾತೃ ಸಂಸ್ಥೆ ಯಂಗ್ ಇಂಡಿಯಾ ಅಧ್ಯಕ್ಷರಾಗಿದ್ದಾರೆ.