ಚಿಕ್ಕಮಗಳೂರು: ಆರ್.ಎಸ್.ಎಸ್ ಚಡ್ಡಿ ಸುಡುವ ಅಭಿಯಾನ ನಡೆಸುವುದಾಗಿ ಹೇಳಿಕೆ ನೀಡಿದ್ದ ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಕೆಂಡಾಮಂಡಲವಾಗಿರುವ ಕೇಸರಿ ಪಾಳಯ ಕಾಂಗ್ರೆಸ್ ನಾಯಕರ ಬೆವರಿಳಿಸುತ್ತಿದೆ. ರಾಜ್ಯಾದ್ಯಂತ ಬಿಜೆಪಿ ಕಾರ್ಯಕರ್ತರು ಚಡ್ಡಿ ಸಂಗ್ರಹಿಸಿ, ಸಿದ್ದರಾಮಯ್ಯನವರಿಗೆ, ಕಾಂಗ್ರೆಸ್ ಕಚೇರಿಗೆ ಪಾರ್ಸಲ್ ಕಳುಹಿಸಲು ಮುಂದಾಗಿದ್ದಾರೆ.
ಸಿದ್ದರಾಮಯ್ಯನವರ ಹೇಳಿಕೆಗೆ ಕಿಡಿಕಾರಿರುವ ಬಿಜೆಪಿ ರಾಷ್ಟ್ರೀಯ ಪ್ರಧಾನಕಾರ್ಯದರ್ಶಿ ಸಿ.ಟಿ.ರವಿ, ಕಾಂಗ್ರೆಸ್ ನವರಿಗೆ ಚಡ್ಡಿ ಕೊರತೆಯಾಗದಂತೆ ನೋಡಿಕೊಳ್ಳಿ, ಅವರು ಜೀವನಪೂರ್ತಿ ಚಡ್ಡಿ ಸುಡುವ ಕೆಲಸವನ್ನೇ ಮಾಡುತ್ತಾ ಕುಳಿತಿರಲಿ ಎಂದು ಟಾಂಗ್ ನೀಡಿದ್ದಾರೆ.
ಕಾಂಗ್ರೆಸ್ ನಾಯಕರಿಗೆ ಬೆಂಕಿ ಹಚ್ಚಲು ಚಡ್ಡಿ ಕೊರತೆಯಾಗದಂತೆ ನೋಡಿಕೊಳ್ಳಿ, ಎಲ್ಲರೂ ಹಳೆಯ ಚಡ್ಡಿಗಳನ್ನು ಕಳುಹಿಸಲು ಕರೆ ಕೊಡುತ್ತೇನೆ. ಈ ಬಗ್ಗೆ ನಾನು ನಿನ್ನೆಯೇ ಕಾರ್ಯಕರ್ತರಿಗೆ ಹೇಳಿದ್ದೇನೆ ಎಂದರು.
ಸಿ.ಟಿ.ರವಿ ಹೇಳಿಕೆ ಬೆನ್ನಲ್ಲೇ ಇದೀಗ ಬಿಜೆಪಿಯ ಕಾರ್ಯಕರ್ತರು ಹಲವೆಡೆ ಮನೆ ಮನೆಗೆ ತೆರಳಿ ಚಡ್ಡಿ ಸಂಗ್ರಹಿಸುತ್ತಿದ್ದು, ಸಿದ್ದರಾಮಯ್ಯನವರಿಗೆ ಚಡ್ಡಿ ಪಾರ್ಸಲ್ ಕಳುಹಿಸಲು ಮುಂದಾಗಿದ್ದಾರೆ.