ಲಕ್ನೋ: ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಸರ್ಕಾರ ಮತ್ತೆ ಪ್ರದೇಶಗಳ ಹೆಸರನ್ನು ಬದಲಾಯಿಸುವತ್ತ ಹೆಜ್ಜೆ ಹಾಕಿದೆ.
ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಟ್ವೀಟ್ ನಲ್ಲಿ, ಮುಂಬರುವ ವಾರಗಳಲ್ಲಿ ರಾಜ್ಯದ ರಾಜಧಾನಿಯಾದ ಲಕ್ನೋ ಹೆಸರನ್ನು ಬದಲಾಯಿಸುವ ಬಗೆಗಿನ ಊಹಾಪೋಹಗಳಿಗೆ ಕಾರಣವಾಗಿದೆ.
ಸೋಮವಾರ ಸಂಜೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಲಕ್ನೋಗೆ ಸ್ವಾಗತಿಸುವ ಟ್ವೀಟ್ನಲ್ಲಿ ಯೋಗಿ ಹೀಗೆ ಬರೆದಿದ್ದಾರೆ. ಶೇಷಾವತಾರಿ ಲಕ್ಷ್ಮಣ್ ನಗರವಾದ ಲಕ್ನೋಗೆ ತಮಗೆ ಹಾರ್ದಿಕ ಸ್ವಾಗತ ಬಯಸುವುದಾಗಿ ಕೋರಿ ಟ್ವೀಟ್ ಮಾಡಿದ್ದಾರೆ. ಇದು ಸಾಮಾಜಿಕ ಜಾಲತಾಣಗಳಲ್ಲಿ ಲಕ್ನೋ ಹೆಸರನ್ನು ಲಕ್ಷ್ಮಣಪುರಿ ಎಂದು ಬದಲಾಯಿಸುವ ಬಗ್ಗೆ ಚರ್ಚೆಗೆ ಕಾರಣವಾಗಿದೆ.
ಲಕ್ಷ್ಮಣನಿಗೆ ಸಮರ್ಪಿತವಾದ ಭವ್ಯವಾದ ದೇವಾಲಯವನ್ನು ಈಗಾಗಲೇ ಲಕ್ನೋದಲ್ಲಿ ನಿರ್ಮಿಸಲಾಗುತ್ತಿದೆ. ಲಖನೌ ಹೆಸರನ್ನು ಲಖನ್ಪುರಿ ಅಥವಾ ಲಕ್ಷ್ಮಣಪುರಿ ಎಂದು ಬದಲಾಯಿಸಬೇಕೆಂಬ ಬೇಡಿಕೆಯನ್ನು ಬಿಜೆಪಿ ನಾಯಕರು ಹಲವು ಬಾರಿ ಎತ್ತಿದ್ದರು.
ಲಕ್ನೋ ಈಗಾಗಲೇ ಲಕ್ಷ್ಮಣ್ ಹೆಸರಿನ ಹಲವಾರು ಹೆಗ್ಗುರುತುಗಳನ್ನು ಹೊಂದಿದೆ. ಇವುಗಳಲ್ಲಿ ಲಕ್ಷ್ಮಣ ತಿಲಾ, ಲಕ್ಷ್ಮಣಪುರಿ ಮತ್ತು ಲಕ್ಷ್ಮಣ ಪಾರ್ಕ್ ಸೇರಿವೆ.
ಯೋಗಿ ಆದಿತ್ಯನಾಥ್ ಸರ್ಕಾರ ತನ್ನ ಹಿಂದಿನ ಅವಧಿಯಲ್ಲಿ ಅಲಹಾಬಾದ್ ಹೆಸರನ್ನು ಪ್ರಯಾಗ್ ರಾಜ್ ಮತ್ತು ಫೈಜಾಬಾದ್ ಅನ್ನು ಅಯೋಧ್ಯೆ ಎಂದು ಬದಲಾಯಿಸಿತ್ತು. ಈ ಮಧ್ಯೆ, ಲಕ್ನೋ ಅಥವಾ ಬೇರೆ ಯಾವುದೇ ನಗರವನ್ನು ಮರುನಾಮಕರಣ ಮಾಡುವ ಯಾವುದೇ ಪ್ರಸ್ತಾಪದ ಬಗ್ಗೆ ನಮಗೆ ಇನ್ನೂ ತಿಳಿದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.