ಕೊರೊನಾ ಸಾಂಕ್ರಾಮಿಕ ತಡೆಗಾಗಿ ಸರಕಾರ ಹೇರಿದ್ದ ಲಾಕ್ಡೌನ್ ದೇಶದ ಬಹುತೇಕ ಕಡೆಗಳಲ್ಲಿ ತೆರವುಗೊಂಡಿದೆ. ಆದರೆ, ಕೊರೊನಾ ಸಾಂಕ್ರಾಮಿಕದ ಆತಂಕ, ಮೂರನೇ ಅಲೆ ಅಪ್ಪಳಿಸುವ ಭೀತಿ ಮಾತ್ರ ಜನರ ಮನಸ್ಸಿನಲ್ಲಿ ಕುಳಿತು ಅವರನ್ನು ಖಿನ್ನತೆಗೆ ದೂಡುತ್ತಿದೆ.
ಸಾಂಕ್ರಾಮಿಕದ ಪರಿಣಾಮ ಭವಿಷ್ಯವು ಪೂರ್ಣ ಅತಂತ್ರವಾಗಿದೆ. ಹೂಡಿಕೆದಾರರು ಹಣ ಚೆಲ್ಲಲು ಹಿಂದೆ ಮುಂದೆ ನೋಡುತ್ತಿದ್ದಾರೆ. ಹಾಗಾಗಿ ಹೊಸ ಯೋಜನೆಗಳು ತಲೆ ಎತ್ತುತ್ತಿಲ್ಲ. ಇದರಿಂದಾಗಿ ಉದ್ಯೋಗಿಗಳು, ವ್ಯಾಪಾರಿಗಳು, ಕಾರ್ಮಿಕರು, ಸೇವಾದಾರರು ಆರ್ಥಿಕ ಸಂಕಷ್ಟಕ್ಕೆ ಸಿಲುಕುವ ಆತಂಕದಲ್ಲಿ ಮುಳುಗುತ್ತಿದ್ದಾರೆ.
’ಪ್ರಜಾಪ್ರಭುತ್ವ ಎಲ್ಲ ನಡೆಯೋದಿಲ್ಲ, ಏನಿದ್ರೂ ಶರಿಯಾ ಕಾನೂನೇ ಇಲ್ಲಿ’: ತಾಲಿಬಾನ್
ಮಾನಸಿನ ಸ್ವಾಸ್ಥ್ಯದ ಮೇಲೆ ಇಂಥ ದುಷ್ಪರಿಣಾಮಗಳು ಹೆಚ್ಚುತ್ತಿರುವ ಕಾರಣ, ಆತ್ಮಹತ್ಯೆ ಪ್ರಕರಣಗಳು ಕೂಡ ಏರಿಕೆ ಕಾಣುತ್ತಿವೆ ಎಂದು ತಜ್ಞವೈದ್ಯರು ಆತಂಕ ವ್ಯಕ್ತಪಡಿಸಿದ್ದಾರೆ. 2020ರ ಕೊರೊನಾ ಲಾಕ್ಡೌನ್ ವೇಳೆ 369 ಆತ್ಮಹತ್ಯೆ ಪ್ರಕರಣಗಳು ಜರುಗಿವೆ ಎಂದು ವರದಿಯಾಗಿದೆ.
ಸೆ.10ರಂದು ವಿಶ್ವ ಆತ್ಮಹತ್ಯೆ ತಡೆ ದಿನವನ್ನಾಗಿ ಆಚರಿಸಲಾಗುತ್ತದೆ. ವಿಶ್ವ ಆರೋಗ್ಯ ಸಂಸ್ಥೆ ಪ್ರಕಾರ ಪ್ರತಿ 100 ಸಾವುಗಳಲ್ಲಿ ಒಂದು ಆತ್ಮಹತ್ಯೆ ಆಗಿರುತ್ತದೆ. ವಿಶ್ವಾದ್ಯಂತ ಪ್ರತಿ 40 ಸೆಕೆಂಡ್ಗಳಿಗೆ ಒಬ್ಬರು ತಮ್ಮ ಪ್ರಾಣತ್ಯಾಗ ಮಾಡುತ್ತಿದ್ದಾರೆ. ಹಾಗಾಗಿ ಕೊರೊನಾದ ಈ ಸಂಕಷ್ಟದ ಕಾಲದಲ್ಲಿ ಹೊಸ ವಿಶ್ವಾಸ, ಹೊಸ ಹುರುಪು , ಹೊಸ ನಿರೀಕ್ಷೆ ಹುಟ್ಟಿಸುವುದು ಸಾಮಾಜಿಕ ಸ್ವಾಸ್ಥ್ಯದ ದೃಷ್ಟಿಯಿಂದ ಅಗತ್ಯವಾಗಿದೆ.
ಕೊರೊನಾದಿಂದ ತಮ್ಮ ಆಪ್ತರನ್ನು ಕಳೆದುಕೊಂಡು ಜೀವನದಲ್ಲಿ ಭರವಸೆ ಇಲ್ಲದಂತಾಗಿರುವ ಮಕ್ಕಳು, ವೃದ್ಧರಿಗೆ ಮಧ್ಯಮ ವಯಸ್ಕರು ಆಶಾಕಿರಣ ಮೂಡಿಸಬೇಕಿದೆ ಎನ್ನುತ್ತಾರೆ ಮಾನಸಿಕ ಆರೋಗ್ಯ ತಜ್ಞರಾದ ಡಾ. ಸಮೀರ್ ಪಾರಿಖ್ ಅವರು.