ಪತಿಯನ್ನು ಹತ್ಯೆಗೈದ ಆಪಾದನೆ ಮೇಲೆ ಆತನ ಮಡದಿ ಹಾಗೂ ಇಬ್ಬರು ಹೆಣ್ಣುಮಕ್ಕಳನ್ನು ಉತ್ತರ ಪ್ರದೇಶದ ನೋಯಿಡಾದಲ್ಲಿ ಬಂಧಿಸಲಾಗಿದೆ.
ವಿಪರೀತ ಕುಡಿಯುತ್ತಿದ್ದ ಕಾರಣ ಪತಿ ಮೇಲೆ ರೋಸಿ ಹೋಗಿದ್ದ ಮಡದಿ ಹಾಗೂ ಮಕ್ಕಳು, ಕುಡಿತದ ಅಮಲಿನಲ್ಲಿದ್ದ ಆತನನ್ನು ಕೊಂದು ನೋಯಿಡಾದ ಉದ್ಯಾನವೊಂದರಲ್ಲಿ ಆತನ ದೇಹವನ್ನು ಎಸೆದಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇಲ್ಲಿನ ಮೊರಾನಾ ಪ್ರದೇಶದ ಸ್ಲಂ ಒಂದರ ಬಳಿ ಇರುವ ಉದ್ಯಾನದಲ್ಲಿ 50 ವರ್ಷದ ಅನಿಲ್ ಕುಮಾರ್ ಮೃತದೇಹ ಗ್ರಾಮಸ್ಥರ ಕಣ್ಣಿಗೆ ಪತ್ತೆಯಾಗಿದೆ.
ಮೊದಲಿಗೆ ಅನಿಲ್ ಕುಮಾರ್ ಕುಡಿತದ ಮತ್ತಿನಲ್ಲಿ ಮೃತಪಟ್ಟಿದ್ದಾನೆ ಎಂದು ಎಲ್ಲರೂ ನಂಬಿದ್ದರು. ಆದರೆ ಆಳವಾದ ತನಿಖೆ ನಡೆಸಿದ ಬಳಿಕ, ಆತನ ಕುಡಿತ ಹಾಗೂ ಇತರ ಕೆಟ್ಟ ಚಟಗಳ ಕಾರಣದಿಂದ ರೋಸಿ ಹೋಗಿ ಹೀಗೆ ಮಾಡಿದ್ದಾರೆ ಎಂದು ತಿಳಿದುಬಂದಿರುವುದಾಗಿ ಪೊಲೀಸ್ ಅಧಿಕಾರಿ ರಾಜೇಶ್. ಎಸ್ ತಿಳಿಸಿದ್ದಾರೆ.
ಅನಿಲ್ ಕುಮಾರನನ್ನು ಉಸಿರುಗಟ್ಟಿಸಿ ಕೊಲ್ಲಲು ಬಳಸಲಾಗಿದ್ದ ಆತನ ಮಡದಿಯ ದುಪಟ್ಟಾ ಸಹ ತನಿಖೆ ಸಂದರ್ಭ ದೊರೆತಿದೆ ಎನ್ನಲಾಗಿದೆ. ಮಡದಿ ಪಿಕಾ ದೇವಿಯನ್ನು ಬಂಧಿಸಿರುವ ಪೊಲೀಸರು, ಮಕ್ಕಳಬ್ಬರೂ ಅಪ್ರಾಪ್ತ ವಯಸ್ಸಿನವರಾದ ಕಾರಣ ಅವರನ್ನು ಬಾಲಾಪರಾಧಿ ನ್ಯಾಯಾಲಯದ ಮುಂದೆ ಹಾಜರು ಪಡಿಸಿದ್ದಾರೆ.