ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲೂಕು ಮಟ್ಟನವಿಲೆ ಬಳಿ ಕಾರ್ ಡಿಕ್ಕಿಯಲ್ಲಿ ಮೃತದೇಹ ಸುಟ್ಟುಹಾಕಿದ ಪ್ರಕರಣವನ್ನು 24 ಗಂಟೆಯಲ್ಲಿ ಪೊಲೀಸರು ಭೇದಿಸಿದ್ದು ಮೂವರನ್ನು ಬಂಧಿಸಿದ್ದಾರೆ.
ಮೃತನ ಪತ್ನಿ ಅಭಿಲಾಷ, ಆಕೆಯ ತಂದೆ ಬೆಂಗಳೂರು ದೊಡ್ಡಜಾಲ ನಿವಾಸಿ ಮಂಜುನಾಥ್ ಮತ್ತು ಆತನ ಪುತ್ರ ಬಸವರಾಜು ಬಂಧಿತ ಆರೋಪಿಗಳಾಗಿದ್ದಾರೆ. ಮೃತಪಟ್ಟ ವ್ಯಕ್ತಿಯನ್ನು ಚನ್ನರಾಯಪಟ್ಟಣ ತಾಲೂಕು ಲಕ್ಷ್ಮೀಪುರದ ಹೆಬ್ಬಾಳು ನಿವಾಸಿ ದಿನೇಶ್ ಎಂದು ಗುರುತಿಸಲಾಗಿದೆ.
4 ವರ್ಷದ ಹಿಂದೆ ಅಭಿಲಾಷ ಮತ್ತು ದಿನೇಶ್ ಅವರ ಮದುವೆಯಾಗಿದ್ದು, ಅಕ್ರಮ ಸಂಬಂಧ ಹೊಂದಿದ್ದ ದಿನೇಶ್ ಪತ್ನಿಯೊಂದಿಗೆ ಉತ್ತಮ ಬಾಂಧವ್ಯ ಹೊಂದಿರಲಿಲ್ಲ. ಈ ಕಾರಣಕ್ಕಾಗಿ ಇಬ್ಬರ ನಡುವೆ ಜಗಳ ನಡೆಯುತ್ತಿತ್ತು. ಇದರಿಂದ ಆಕ್ರೋಶಗೊಂಡ ಮಂಜುನಾಥ್ ಮಗಳಿಗೆ ವಂಚಿಸಿದ ಅಳಿಯನನ್ನು ಕೊಲೆ ಮಾಡಲು ನಿರ್ಧರಿಸಿದ್ದಾನೆ. ದಿನೇಶನನ್ನು ದೊಡ್ಡಜಾಲದ ಮನೆಗೆ ಕರೆಸಿಕೊಂಡು ಹತ್ಯೆ ಮಾಡಿದ್ದಾರೆ. ಬಳಿಕ ಕಾರ್ ನಲ್ಲಿ ಮೃತದೇಹವನ್ನು ಮಟ್ಟನವಿಲೆಗೆ ತಂದು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಪರಾರಿಯಾಗಿದ್ದಾರೆ. ತನಿಖೆ ಕೈಗೊಂಡ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.