ಕೊರೊನಾ ಲಾಕ್ ಡೌನ್ ಸಂದರ್ಭದಲ್ಲಿ ದೇಶದ ಅನೇಕ ಕಡೆ ಸಂಕಷ್ಟಕ್ಕೆ ಸಿಲುಕಿದ ಸಂತ್ರಸ್ತರನ್ನು ಸಂತೈಸಿದ ಅನೇಕ ಮಂದಿ ಹೀರೋಗಳಾಗಿ ಹೊರಹೊಮ್ಮಿದ್ದಾರೆ. ಅದರಲ್ಲೂ ಹಸಿದವರ ಹೊಟ್ಟೆ ತುಂಬಿಸಿದವರು ನಿಜ ಅರ್ಥದಲ್ಲಿ ಅನ್ನದಾತ ಎನಿಸಿಕೊಂಡಿದ್ದಾರೆ.
ಹೈದರಾಬಾದಿನ ಸಾಫ್ಟ್ವೇರ್ ಕಂಪನಿಯ ಎಚ್.ಆರ್. ರಾಮು ದೋಸಪತಿ ಎಂಬಾತ ತನ್ನ ಸಂಬಳದ ಬಹುಪಾಲು ಅಂಶವನ್ನು ಬಳಸಿ ಮನೆಯಲ್ಲೇ ರೈಸ್ ಎಟಿಎಂ ಸ್ಥಾಪಿಸಿದ್ದಾರೆ.
ಮಹಿಳಾ ಭದ್ರತಾ ಸಿಬ್ಬಂದಿಯೊಬ್ಬರು ತಮಗೆ ಬರುತ್ತಿದ್ದ 6 ಸಾವಿರ ರೂ. ಸಂಬಳದಲ್ಲಿ 2 ಸಾವಿರ ರೂ. ಖರ್ಚು ಮಾಡಿ ಲಾಕ್ ಡೌನ್ ಸಂದರ್ಭದಲ್ಲಿ ವಲಸೆ ಕಾರ್ಮಿಕರಿಗೆ ಊಟ ಕೊಟ್ಟಿದ್ದರು. ಇದರಿಂದ ಪ್ರೇರಿತಗೊಂಡ ರಾಮು, 6 ಸಾವಿರ ಸಂಬಳ ಬರುವ ಆಕೆಯೇ 2 ಸಾವಿರವನ್ನು ಪರರಿಗಾಗಿ ಖರ್ಚು ಮಾಡುವಾಗ, ತಿಂಗಳಿಗೆ 1.5 ಲಕ್ಷ ರೂ.ವರೆಗೆ ಸಂಬಳ ಪಡೆಯುವ ನಾನೇಕೆ ನೆರವು ನೀಡಬಾರದು ಎಂದು ಯೋಚಿಸಿದ್ದಾರೆ.
ಏಪ್ರಿಲ್ ನಲ್ಲಿ ತಮ್ಮ ಖಾತೆಯಲ್ಲಿದ್ದ 1.5 ಲಕ್ಷ ರೂ. ಡ್ರಾ ಮಾಡಿ ರೈಸ್ ಎಟಿಎಂ ಶುರು ಮಾಡಿದ ರಾಮು, ಜೂನ್ ನಲ್ಲಿ ತನ್ನ ಭವಿಷ್ಯನಿಧಿಯಲ್ಲಿದ್ದ 3.20 ಲಕ್ಷ ರೂ.ಗಳನ್ನೂ ಡ್ರಾ ಮಾಡಿ ಇದಕ್ಕೇ ಹೂಡಿಕೆ ಮಾಡಿದ್ದಾರೆ. 170 ದಿನಗಳಿಂದ ನಿರಂತರವಾಗಿ ಅನ್ನ ದಾಸೋಹ ನಡೆಯುತ್ತಿದ್ದು, ಸ್ವಂತ ಜೇಬಿನಿಂದ ಇದುವರೆಗೆ 5 ಲಕ್ಷ ರೂ. ಖರ್ಚು ಮಾಡಿದ್ದಾರೆ. ಇದರಿಂದ ಪ್ರೇರಣೆಗೊಂಡ ಅನೇಕರು ರಾಮುಗೆ ಹಣಕಾಸಿನ ನೆರವು ನೀಡಲು ಮುಂದಾಗಿದ್ದಾರೆ.
ಆದರೆ, ಇದನ್ನೊಪ್ಪದ ರಾಮು, ಎಲ್ಲರೂ ನನಗೆ ಹಣ ಕೊಡುವುದು ಮುಖ್ಯವಲ್ಲ. ಎಲ್ಲರಿಗೂ ಹಸಿವು ನೀಗಿಸುವಷ್ಟು ಊಟ ಸಿಗುವುದು ಮುಖ್ಯ. ಹೀಗಾಗಿ ನೀವಿರುವಲ್ಲೇ ನಿಮ್ಮದೇ ದುಡ್ಡಿನಲ್ಲಿ ಈ ಕಾರ್ಯ ಮಾಡಿ ಎಂದಿದ್ದಾರೆ. ತಮ್ಮ ರೈಸ್ ಎಟಿಎಮ್ ಗೆ ನಿತ್ಯ ನೂರಾರು ಮಂದಿ ಬರುತ್ತಾರೆ. ಇದರಲ್ಲಿ ಶೇ.90 ರಷ್ಟು ಜನರಿಗೆ ಈ ಕಿಟ್ ಗಳ ಆವಶ್ಯಕತೆ ಇದೆ. ಉಳಿದ ಶೇ.10 ಜನರಿಗಾಗಿ ಇವರಿಗೆಲ್ಲ ಅನ್ಯಾಯ ಆಗಬಾರದು. ಪ್ರತಿ ಕಿಟ್ ಗೆ 3500 ರೂ. ಖರ್ಚಾಗುತ್ತದೆ. ಆದ್ದರಿಂದ ಆವಶಕ್ಯತೆ ಇಲ್ಲದ ಶೇ.10 ರಷ್ಟು ಜನರು ಅವರೇ ಅರ್ಥೈಸಿಕೊಳ್ಳುತ್ತಿದ್ದಾರೆ ಎನ್ನುತ್ತಾರೆ ರಾಮು.