ಬೆಂಗಳೂರು: ಆನೆ ಮಾವುತರ ವೇತನವನ್ನು ಅರಣ್ಯ ರಕ್ಷಕರ ವೇತನಕ್ಕೆ ಸರಿಸಮನಾಗಿ ನಿಗದಿಪಡಿಸುವಂತೆ ಹಲವು ವರ್ಷಗಳಿಂದ ಇದ್ದ ಬೇಡಿಕೆಯನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಈಡೇರಿಸಿದ್ದಾರೆ.
ಇನ್ನು ಮುಂದೆ ಮಾವುತರಿಗೆ ಕೌಶಲ್ಯ ಕೆಲಸಗಾರರೆಂದು ಪರಿಗಣಿಸಿ ಅವರಿಗೆ ಅರಣ್ಯ ರಕ್ಷಕರ ವೇತನ ನೀಡಲಾಗುವುದು. ಇಂದು ಸಿಎಂ ಅಧ್ಯಕ್ಷತೆಯಲ್ಲಿ ನಡೆದ ಅರಣ್ಯ, ಪರಿಸರ, ಜೀವಿಶಾಸ್ತ್ರ ಇಲಾಖೆಯ ಪರಿಶೀಲನಾ ಸಭೆಯಲ್ಲಿ ಈ ಬಗ್ಗೆ ಚರ್ಚಿಸಿ ತೀರ್ಮಾನಿಸಲಾಗಿದೆ.
ವನ್ಯಜೀವಿಗಳ ದಾಳಿಯಿಂದ ಮರಣ ಹೊಂದುವವರಿಗೆ ನೀಡುವ ಪರಿಹಾರ ಧನದ ಮೊತ್ತವನ್ನು 7.50 ಲಕ್ಷ ರೂ.ಗಳಿಂದ 10 ಲಕ್ಷ ರೂ.ಗಳಿಗೆ ಹೆಚ್ಚಿಸಲು ನಿರ್ಧರಿಸಲಾಯಿತು. ಇದರಿಂದ ವನ್ಯಜೀವಿಗಳ ದಾಳಿಗೊಳಗಾಗಿ ಮೃತಪಟ್ಟ ಕುಟುಂಬಗಳಿಗೆ ಹೆಚ್ಚಿನ ಪರಿಹಾರ ನೀಡಿದಂತಾಗುವುದು. ವನ್ಯಜೀವಿ ಸಂರಕ್ಷಣೆಯಲ್ಲಿ ಮರಣ ಹೊಂದುವವರಿಗೆ ಪರಿಹಾರ ಧನ ನೀಡುವುದು ಬಾಕಿಯಿದ್ದು, ಆರ್ಥಿಕ ಇಲಾಖೆಯಿಂದ ಅನುದಾನವನ್ನು ತಕ್ಷಣವೇ ಬಿಡುಗಡೆ ಮಾಡುವಂತೆ ಸಿಎಂ ಸೂಚಿಸಿದ್ದಾರೆ.
ಅರಣ್ಯ ಸಚಿವ ಆನಂದ ಸಿಂಗ್, ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್, ಅರಣ್ಯ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಸಂದೀಪ್ ದವೆ, ಪ್ರಧಾನ ಕಾರ್ಯದರ್ಶಿಗಳಾದ ಸ್ಮಿತಾ ಬಿಜ್ಜೂರು ಹಾಗೂ ವಿಜಯ ಕುಮಾರ್ ಗೋಗಿ ಉಪಸ್ಥಿತರಿದ್ದರು.