ಲಖ್ನೋ: ಪಶ್ಚಿಮ ಉತ್ತರ ಪ್ರದೇಶದ ಮುಜಾಫರ್ ನಗರ ಬಳಿ ವಲಸೆ ಕಾರ್ಮಿಕರ ಮೇಲೆ ಬಸ್ ಹರಿದು 6 ಮಂದಿ ಸಾವನ್ನಪ್ಪಿದ್ದಾರೆ.
ಬುಧವಾರ ರಾತ್ರಿ ಘಟನೆ ನಡೆದಿದೆ. ಮುಜಾಫರ್ ನಗರ ಮತ್ತು ಸಹರಾನ್ ಪುರ ರಾಜ್ಯ ಹೆದ್ದಾರಿಯಲ್ಲಿ ರಾತ್ರಿ 11 ಗಂಟೆ ಸುಮಾರಿಗೆ ಭೀಕರ ಅಪಘಾತ ಸಂಭವಿಸಿದೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ವಲಸೆ ಕಾರ್ಮಿಕರು ಪಂಜಾಬ್ ನಿಂದ ಬಿಹಾರದ ಗೋಪಾಲ ಗಂಜ್ ಗೆ ರಾಷ್ಟ್ರೀಯ ಹೆದ್ದಾರಿ 9 ರಲ್ಲಿ ಸಾಗುತ್ತಿದ್ದರು. ಅವರು ಮುಜಾಫರ್ ನಗರ ಸಹಾರನ್ ಪುರ ಹೆದ್ದಾರಿ ಮೂಲಕ ನಡೆದುಕೊಂಡು ಹೋಗುತ್ತಿದ್ದ ವೇಳೆ ವೇಗವಾಗಿ ಬಂದ ಬಸ್ ಕಾರ್ಮಿಕರ ಮೇಲೆಯೇ ಚಲಿಸಿದೆ.
ಈ ವೇಳೆ ಹರೇಕ್ ಸಿಂಗ್, ವಿಕಾಸ್, ಗುಡ್ಡು, ವಾಸುದೇವ್, ಹರೀಶ್, ವೀರೇಂದ್ರ ಎಂಬುವವರು ಸಾವನ್ನಪ್ಪಿದ್ದಾರೆ. ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಮುಜಾಫರ್ ನಗರ ಕೊಟ್ವಾಲಿ ಪೊಲೀಸ್ ಠಾಣೆ ಇನ್ಸ್ ಪೆಕ್ಟರ್ ಅನಿಲ್ ಕಪರ್ವಾನ್ ಮಾಹಿತಿ ನೀಡಿದ್ದಾರೆ.