ದೇಶದಲ್ಲಿ ಕರೋನಾ ಮಹಾಮಾರಿ ವಕ್ಕರಿಸಿಕೊಂಡಿರುವ ಪರಿಣಾಮ ಇದರ ನಿಯಂತ್ರಣಕ್ಕಾಗಿ ಕಳೆದ 40 ದಿನಗಳಿಗೂ ಅಧಿಕ ಕಾಲದಿಂದ ಲಾಕ್ ಡೌನ್ ಜಾರಿಗೊಳಿಸಲಾಗಿದೆ. ಇದರಿಂದಾಗಿ ವ್ಯಾಪಾರ-ವಹಿವಾಟು ಇಲ್ಲದೆ ಸಾರ್ವಜನಿಕರು ಆರ್ಥಿಕವಾಗಿ ತತ್ತರಿಸಿಹೋಗಿದ್ದಾರೆ.
ಕೇಂದ್ರ ಹಾಗೂ ರಾಜ್ಯ ಸರ್ಕಾರ ಜನರಿಗೆ ನೆರವಾಗಲು ಕೆಲ ಪ್ಯಾಕೇಜ್ ಘೋಷಿಸಿದ್ದರೂ ಇದು ಎಲ್ಲ ವರ್ಗದವರಿಗೆ ತಲುಪಿಲ್ಲ. ಹೀಗಾಗಿ ನೆರವಿನ ಮತ್ತಷ್ಟು ಪ್ಯಾಕೇಜ್ ಘೋಷಿಸಬೇಕೆಂದು ಒತ್ತಾಯ ಕೇಳಿ ಬರುತ್ತಿರುವ ಮಧ್ಯೆ ಇತ್ತೀಚೆಗೆ ನೀಡಿರುವ ವಿದ್ಯುತ್ ಬಿಲ್ ಸಾರ್ವಜನಿಕರಿಗೆ ಶಾಕ್ ನೀಡಿದೆ.
ಲಾಕ್ ಡೌನ್ ಸಂದರ್ಭದಲ್ಲಿ ಮಾರ್ಚ್ ತಿಂಗಳ ರೀಡಿಂಗ್ ನೋಡಲು ಬರಲು ಸಾಧ್ಯವಾಗದ ಕಾರಣ ಸಾರ್ವಜನಿಕರು ಸರಾಸರಿ ಮೊತ್ತ ಪಾವತಿಸಬೇಕೆಂದು ಹೇಳಲಾಗಿತ್ತು. ಆದರೆ ಬಹುತೇಕರು ಇದನ್ನು ಪಾಲಿಸದ ಕಾರಣ ಇದೀಗ ಮಾರ್ಚ್ ಹಾಗೂ ಏಪ್ರಿಲ್ ತಿಂಗಳ ಬಿಲ್ ಅನ್ನು ಒಟ್ಟಿಗೆ ನೀಡಲಾಗಿದೆ.
ಇದು ಗ್ರಾಹಕರಿಗೆ ಭಾರಿ ಹೊರೆಯಾಗಿ ಪರಿಣಮಿಸಿದ್ದು, ಯಾವುದೇ ಕೆಲಸ -ಕಾರ್ಯಗಳಿಲ್ಲದೆ ಆರ್ಥಿಕವಾಗಿ ಕಂಗೆಟ್ಟಿರುವ ಸಂದರ್ಭದಲ್ಲಿ ಇದನ್ನು ಪಾವತಿಸಲು ಕಷ್ಟವಾಗುತ್ತದೆ ಎಂದು ಹೇಳುತ್ತಿದ್ದಾರೆ. ಹೀಗಾಗಿ ವಿದ್ಯುತ್ ಬಿಲ್ ನಲ್ಲಿ ವಿನಾಯಿತಿ ನೀಡುವ ಮೂಲಕ ಸಂಕಷ್ಟದ ಸಂದರ್ಭದಲ್ಲಿ ನೆರವಾಗಬೇಕೆಂಬ ಮಾತು ಕೇಳಿಬರುತ್ತಿದೆ.