ಕೊರೊನಾದಿಂದ ಜನ ತತ್ತರಿಸಿ ಹೋಗಿದ್ದಾರೆ. ಸರ್ಕಾರಗಳು ಆಯಾಯ ರಾಜ್ಯಗಳಲ್ಲಿ ಲಾಕ್ಡೌನ್ ಮಾಡಿದ್ದು ಆರ್ಥಿಕ ಹೊಡೆತ ಅನುಭವಿಸುತ್ತಿವೆ. ಅತ್ತ ಪ್ರಜೆಗಳ ರಕ್ಷಣೆ ಒಂದು ಕಡೆಯಾದರೆ ಮತ್ತೊಂದು ಕಡೆ ದೇಶ ರಕ್ಷಣೆ ಮಾಡಬೇಕಿದೆ.
ಹೀಗಾಗಿ ಲಾಕ್ಡೌನ್ ಇದ್ದರೂ ಒಂದಿಷ್ಟು ವಿನಾಯಿತಿ ನೀಡಲಾಗುತ್ತಿದೆ. ಇದೀಗ ಮೂರನೇ ಹಂತದ ಲಾಕ್ಡೌನ್ ಮುಗಿದ ನಂತರ ಮುಂದೇನು ಎಂಬ ಪ್ರಶ್ನೆ ಉದ್ಭವವಾಗಿದೆ.
ಹೌದು, ಎರಡು ಹಂತದ ಲಾಕ್ಡೌನ್ನಲ್ಲಿ ಜನರಿಗೆ ತುರ್ತು ಸೇವೆ ಬಿಟ್ಟು ಯಾವುದೇ ವಿನಾಯ್ತಿ ನೀಡಿರಲಿಲ್ಲ. ಆದರೆ ಮೂರನೇ ಹಂತದ ಲಾಕ್ಡೌನ್ನಲ್ಲಿ ಬಹುತೇಕ ವಿನಾಯ್ತಿ ನೀಡಲಾಗಿದೆ. ಆದರೆ ಮೇ 17 ಕ್ಕೆ ಲಾಕ್ ಡೌನ್ ಮುಗಿದರೆ ಮುಂದೇನು ಎಂಬ ಪ್ರಶ್ನೆಯನ್ನು ಕಾಂಗ್ರೆಸ್ ಹಿರಿಯ ನಾಯಕಿ ಸೋನಿಯಾ ಗಾಂಧಿ ಕೇಂದ್ರಕ್ಕೆ ಪ್ರಶ್ನೆ ಹಾಕಿದ್ದಾರೆ.
ಕಾಂಗ್ರೆಸ್ ಅಧಿಕಾರದಲ್ಲಿರುವ ರಾಜ್ಯಗಳ ಮುಖ್ಯಮಂತ್ರಿಗಳ ಸಭೆಯಲ್ಲಿ ಮಾತನಾಡಿರುವ ಇವರು ಕೇಂದ್ರದ ಮುಂದಿನ ಯೋಜನೆಯನ್ನು ಪ್ರಶ್ನಿಸಿದ್ದಾರೆ. ಮೇ 17 ರ ನಂತರವೂ ಲಾಕ್ಡೌನ್ ಮುಂದುವರೆಯುತ್ತಾ ಅಥವಾ ಲಾಕ್ಡೌನ್ ಪೂರ್ಣವಾಗುತ್ತಾ.? ಲಾಕ್ಡೌನ್ ಮುಂದುವರೆಸಿದರೂ ಯಾವ ಮಾನದಂಡದ ಆಧಾರದ ಮೇಲೆ ಲಾಕ್ಡೌನ್ ಮುಂದುವರೆಸಲಾಗುತ್ತದೆ. ಇನ್ನು ಎಷ್ಟು ಸಮಯದವರೆಗೆ ಕೇಂದ್ರ ಲಾಕ್ಡೌನ್ ಮುಂದುವರೆಸಲಾಗುತ್ತದೆ ಎಂದು ಕೇಳಿದ್ದಾರೆ.