ಶಿವಮೊಗ್ಗ: ಹಣದ ಗಂಟು ಕಳೆದುಕೊಂಡ ಅಜ್ಜಿಗೆ ಮಹಾನಗರಪಾಲಿಕೆ ಸದಸ್ಯ ಪ್ರಭು ಅವರು ಅದನ್ನು ವಾಪಾಸ್ ಮರಳಿಸಿದ ಘಟನೆ ನಗರದಲ್ಲಿ ನಡೆದಿದೆ.
ಕೋಟೆ ರಸ್ತೆಯಲ್ಲಿ ಅಜ್ಜಿಯೊಬ್ಬರು ತಮ್ಮ ಬಟ್ಟೆ ಗಂಟಿನ ಜೊತೆಗೆ ಹಣವನ್ನು ಇಟ್ಟು ಸ್ನಾನ ಮಾಡಲು ತೆರಳಿದ್ದರು. ಆ ಸಮಯದಲ್ಲಿ ಪಾಲಿಕೆಯ ಕಸ ಡಂಪ್ ಮಾಡುವವರು ಹಣವಿರುವ ಅರಿವಿಲ್ಲದೆ ಅಜ್ಜಿಯ ಚೀಲವನ್ನು ಲಾರಿಗೆ ಎತ್ತಿ ಹಾಕಿ ಎಲ್ಲೋ ಒಂದು ಕಡೆ ಡಂಪ್ ಮಾಡಿದ್ದರು.
ಸ್ನಾನ ಮಾಡಿ ಬಂದ ಅಜ್ಜಿ ಬಟ್ಟೆ ಮತ್ತು ಹಣದ ಗಂಟನ್ನು ಹುಡುಕಿದಾಗ ಕಸದವರು ತೆಗೆದುಕೊಂಡು ಹೋಗಿದ್ದಾರೆ ಎಂದು ತಿಳಿಯಿತು. ಆ ಅಜ್ಜಿ ತಲೆ ಮೇಲೆ ಕೈಹೊತ್ತು ಕುಳಿತುಕೊಂಡಿದ್ದಾರೆ. ಕೈಯಲ್ಲಿದ್ದ ಕಾಸನ್ನು ಕಳೆದುಕೊಂಡು ಬಟ್ಟೆಯೂ ಇಲ್ಲದೇ ಅಜ್ಜಿಯ ರೋಧನ ಕಾರ್ಪೋರೇಟರ್ ಪ್ರಭು ಅವರಿಗೆ ತಿಳಿಯಿತು.
ತಕ್ಷಣವೇ ಅವರು ಕಾರ್ಯಪ್ರವೃತ್ತರಾಗಿ ಎಲ್ಲೆಲ್ಲಿ ಕಸ ಡಂಪ್ ಮಾಡಿರುತ್ತಾರೋ ಅಲ್ಲಿಗೆಲ್ಲ ಹೋಗಿ ಹುಡುಕಿ ಅಜ್ಜಿಯ ಬಟ್ಟೆ ಹಾಗೂ ಗಂಟನ್ನು ತಂದುಕೊಟ್ಟರು. ಆಗ ಅಜ್ಜಿಯ ಮುಖದಲ್ಲಿ ಸಂತೋಷಕ್ಕೆ ಪಾರವೇ ಇರಲಿಲ್ಲ. ಪಾಲಿಕೆ ಸದಸ್ಯರೊಬ್ಬರ ಹೃದಯವಂತಿಕೆಯಿಂದ ಅಜ್ಜಿಯ ದುಃಖ ಮರೆಯಾಯಿತು. ಅಷ್ಟೆ ಅಲ್ಲ ಪ್ರಭು ಅವರನ್ನು ಕೋಟೆ ನಾಗರಿಕರ ಹಿತರಕ್ಷಣಾ ಸಮಿತಿ ಹೃತ್ಪೂರ್ವಕವಾಗಿ ಅಭಿನಂದನೆ ಸಲ್ಲಿಸಿತು.