ದೇಶದಾದ್ಯಂತ ಲಾಕ್ಡೌನ್ ಜಾರಿಯಲ್ಲಿರುವುದರಿಂದ ಜನ ಸಾಮಾನ್ಯರು ಕೆಲಸವಿಲ್ಲದೆ ಕಂಗಾಲಾಗಿ ಹೋಗಿದ್ದಾರೆ. ಸರ್ಕಾರಗಳು ಕೆಲವೊಂದು ನೆರವು ಘೋಷಿಸಿದ್ದರೂ ಯಾವುದಕ್ಕೂ ಸಾಲದೆ ದೈನಂದಿನ ಜೀವನ ನಡೆಸಲು ಪರದಾಡುವಂತಾಗಿದೆ.
ಇದರ ಮಧ್ಯೆ ಮಹಾರಾಷ್ಟ್ರ ಸರ್ಕಾರ ಜನ ಸಾಮಾನ್ಯರಿಗೆ ಬಂಪರ್ ಕೊಡುಗೆಯೊಂದನ್ನು ನೀಡಿದೆ. ಈವರೆಗೆ ಶೇಕಡಾ 80ರಷ್ಟು ಜನರು ಮಹಾತ್ಮ ಜ್ಯೋತಿಬಾ ಪುಲೆ ಜನ ಆರೋಗ್ಯ ಯೋಜನೆಯಲ್ಲಿ ವಿಮೆ ಸೌಲಭ್ಯ ಪಡೆಯುತ್ತಿದ್ದು, ಇದನ್ನು ಈಗ ಉಳಿದ ಶೇಕಡಾ 15ರಷ್ಟು ಜನರಿಗೂ ವಿಸ್ತರಿಸಲಾಗಿದೆ.
ಈ ಕುರಿತು ಘೋಷಣೆ ಮಾಡಿರುವ ಆರೋಗ್ಯ ಸಚಿವ ರಾಜೇಶ್ ತೋಪೆ, ಜನ ಸಾಮಾನ್ಯರಿಗೆ ಉಚಿತ ಮತ್ತು ಕ್ಯಾಶ್ ಲೆಸ್ ವಿಮೆ ನೀಡಲು ರಾಜ್ಯ ಸರ್ಕಾರ ತೀರ್ಮಾನಿಸಿದೆ ಎಂದು ತಿಳಿಸಿದ್ದಾರೆ. ಈ ಸಂಕಷ್ಟದ ಕಾಲದಲ್ಲಿ ಎಲ್ಲ ಜನರಿಗೂ ನೆರವಾಗಬೇಕು ಎಂಬ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ.