ಕೊರೊನಾ ಮಹಾಮಾರಿಯಿಂದ ತಪ್ಪಿಸಿಕೊಳ್ಳಲು ದೇಶದೆಲ್ಲೆಡೆ ಜನ ಹ್ಯಾಂಡ್ ಸ್ಯಾನಿಟೈಸರ್, ಮಾಸ್ಕ್ ಬಳಕೆ ಮಾಡುತ್ತಿದ್ದಾರೆ. ಕೊರೊನಾ ಸೋಂಕಿನ ಭಯಕ್ಕೆ ಎಲ್ಲಾ ಕಡೆಗಳಲ್ಲಿ ಹ್ಯಾಂಡ್ ಸ್ಯಾನಿಟೈಸರ್ ಇದ್ದೇ ಇರುತ್ತದೆ. ಅದೇ ರೀತಿ ಎಟಿಎಂಗಳಲ್ಲೂ ಸ್ಯಾನಿಟೈಸರ್ ಇಡಲಾಗುತ್ತಿದೆ. ಆದರೆ ಕಳ್ಳರು ಮಾತ್ರ ಇದನ್ನೂ ಬಿಡದೆ ಹೊತ್ತೊಯ್ಯುತ್ತಿದ್ದಾರೆ.
ಹೌದು, ಕಳೆದ ವಾರವಷ್ಟೆ ವಿಜಯಪುರದಲ್ಲಿ ಇಂತಹದ್ದೇ ಘಟನೆ ನಡೆದಿದೆ. ಹಣ ಕದಿಯಲು ಬಂದ ಕಳ್ಳರು ಹಣ ಸಿಗದೆ ಹ್ಯಾಂಡ್ ಸ್ಯಾನಿಟೈಸರ್ ಹೊತ್ತೊಯ್ದಿದ್ದಾರೆ. ಇದೇ ತರಹದ ಘಟನೆಗಳು ಸಾಕಷ್ಟು ಕಡೆಗಳಲ್ಲಿ ಆಗಿವೆ, ಆದರೆ ವರದಿಗಳಾಗಿಲ್ಲ. ಈ ರೀತಿಯ ಘಟನೆಗಳಿಂದ ಬ್ಯಾಂಕ್ ಸಿಬ್ಬಂದಿಗೆ ಇದೊಂದು ದೊಡ್ಡ ತಲೆನೋವಾಗಿದೆ.
ಅತ್ತ ಸರ್ಕಾರ ತಮ್ಮ ತಮ್ಮ ಕಚೇರಿಗಳಲ್ಲಿ ಹ್ಯಾಂಡ್ ಸ್ಯಾನಿಟೈಸರ್ ಇಡಲೇಬೇಕು ಅಂತ ಸೂಚಿಸಿದೆ. ಹೀಗಾಗಿ ಬ್ಯಾಂಕ್ ನವರು ಎಟಿಎಂ ಗಳಲ್ಲಿ ಹ್ಯಾಂಡ್ ಸ್ಯಾನಿಟೈಸರ್ ಇಡುತ್ತಿದ್ದಾರೆ. ಆದರೆ ಕಳ್ಳರು ಮಾತ್ರ ಲಾಕ್ ಡೌನ್ ನ ಬಂಡವಾಳ ಮಾಡಿಕೊಂಡು ಇಂತಹ ವಸ್ತುಗಳನ್ನೂ ಬಿಡದೆ ಕದಿಯುತ್ತಿದ್ದಾರೆ.