ಚೀನಾದ ವುಹಾನ್ ನಗರದಲ್ಲಿ ಆರಂಭಗೊಂಡು ಇದೀಗ ಭಾರತಕ್ಕೂ ಕಾಲಿಟ್ಟಿರುವ ಕರೋನಾ ಮಹಾಮಾರಿ ಈಗಾಗಲೇ 1,146 ಮಂದಿಯನ್ನು ಬಲಿ ಪಡೆದಿದ್ದು, 34 ಸಾವಿರಕ್ಕೂ ಅಧಿಕ ಮಂದಿ ಸೋಂಕು ಪೀಡಿತರಾಗಿದ್ದಾರೆ.
ಈ ಸೋಂಕು ತಗುಲದಂತೆ ಪಾರಾಗಲು ಕೈಗಳನ್ನು ಪದೇ ಪದೇ ಸ್ವಚ್ಛಗೊಳಿಸಿಕೊಳ್ಳುವುದರ ಜೊತೆಗೆ ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಅತಿ ಮುಖ್ಯ ಎಂದು ಹೇಳಲಾಗಿತ್ತು. ಇದೀಗ ತಜ್ಞ ವೈದ್ಯರು ಮತ್ತೊಂದು ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ.
ಕಾಲಿನ ಮೂಲಕವೂ ಕರೋನಾ ಸೋಂಕು ಹರಡುತ್ತದೆ ಎಂದು ತಿಳಿಸಿರುವ ತಜ್ಞ ವೈದ್ಯರು, ಕೈಗಳ ಸ್ವಚ್ಛತೆಗೆ ನೀಡಿದ ಆದ್ಯತೆಯನ್ನೇ ಕಾಲುಗಳಿಗೂ ನೀಡಬೇಕು ಎಂದು ಸಲಹೆ ನೀಡಿದ್ದಾರೆ.
ಸೋಂಕು ಪೀಡಿತ ವ್ಯಕ್ತಿ ಸೀನಿದಾಗ, ಕೆಮ್ಮಿದಾಗ ಅಥವಾ ಉಗುಳಿದಾಗ ನೆಲಕ್ಕೆ ಬೀಳುವ ತುಂತುರು ಹನಿಗಳ ಮೂಲಕ ಈ ವೈರಸ್ ಆರೋಗ್ಯವಂತ ವ್ಯಕ್ತಿಯ ಪಾದಕ್ಕೆ ಅಂಟಿಕೊಂಡು ಎಲ್ಲೆಡೆ ಹರಡುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ.
ಹೀಗಾಗಿ ಹೊರ ಹೋಗುವಾಗ ಪಾದರಕ್ಷೆಗಳನ್ನು ಹಾಕಿಕೊಂಡೇ ಹೋಗಬೇಕು. ಅಲ್ಲದೆ ಪಾದರಕ್ಷೆಗಳನ್ನು ಮನೆಯ ಹೊರಗಡೆ ಬಿಡಬೇಕು. ಯಾವುದೇ ಕಾರಣಕ್ಕೂ ಕೈಗಳಿಂದ ಇದನ್ನು ಮುಟ್ಟಬಾರದು. ಅಲ್ಲದೆ ಬೇರೆಯವರ ಪಾದರಕ್ಷೆಗಳನ್ನು ಧರಿಸಬಾರದು ಎಂದು ಸೂಚಿಸಿದ್ದಾರೆ.