ಬೆಂಗಳೂರು : ನಮ್ಮ ಕಾಂಗ್ರೆಸ್ ಸರ್ಕಾರ ಬಂದ ನಂತರ ಪಿಡಿಒ ಹುದ್ದೆಗಳ ನೇಮಕಾತಿಗೆ KPSC ಮೂಲಕ ಪರೀಕ್ಷೆ ನಡೆಸಿದ್ದೇವೆ. ಶೀಘ್ರದಲ್ಲಿಯೇ ಫಲಿತಾಂಶವನ್ನು ಬಿಡುಗಡೆ ಮಾಡಲಾಗುತ್ತದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಮೇಲ್ಮನೆ ಸದಸ್ಯರು ಇರಬಹುದು, ಕೆಳಮನೆ ಸದಸ್ಯರು ಇರಬಹುದು ಅವರ ಆಪ್ತ ಸಹಾಯಕರಾಗಿ ಪಿಡಿಒಗಳನ್ನು ನೇಮಕ ಮಾಡಿಕೊಂಡಿದ್ದಾರೆ. ನಾನು ಇಲಾಖೆಯ ಜವಾಬ್ದಾರಿ ವಹಿಸಿಕೊಂಡ ನಂತರ ಪಿಡಿಒಗಳು ಆಪ್ತ ಸಹಾಯಕರು ಆಗಬಾರದು ಎಂದು ನಾನು ಆದೇಶವನ್ನು ಹೊರಡಿಸಿದ್ದೆ, ಎಲ್ಲಾ ಸದಸ್ಯರಲ್ಲಿ ಮನವಿ ಮಾಡಿಕೊಂಡಿದ್ದೆ.
ಈಗಾಗಲೇ 78 ಪಿಡಿಒಗಳು ಶಾಸಕರ ಆಪ್ತ ಸಹಾಯಕರಾಗಿ ಕೆಲಸ ಮಾಡುತ್ತಿದ್ದಾರೆ. ಇದರಿಂದ ಗ್ರಾಮ ಪಂಚಾಯತಿಗಳ ಆಡಳಿತ ನಿರ್ವಹಣೆ ನಡೆಸಲು ಕಷ್ಟವಾಗುತ್ತಿದೆ. ಈ ವಿಚಾರವಾಗಿ ಮೇಲ್ಮನೆ ಅಧ್ಯಕ್ಷರ ಬಳಿ ಸಹ ಮನವಿ ಮಾಡಿಕೊಂಡಿದ್ದೇನೆ.
ಇದಲ್ಲದೆ ಪಿಡಿಒಗಳು ವರ್ಗಾವಣೆಯನ್ನು ವೈಜ್ಞಾನಿಕವಾಗಿ ನಡೆಸುವುದಕ್ಕೆ ಸರ್ವ ಪ್ರಯತ್ನ ಮಾಡಲಾಗುತ್ತಿದೆ. ಹದಗೆಟ್ಟಿರುವ ವ್ಯವಸ್ಥೆಯನ್ನು ಸರಿಪಡಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ.ನಾವೆಲ್ಲರೂ ಶಾಸಕರು, ಹೊಸ ಶಾಸನ ಮಾಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಇದಕ್ಕೆ ಎಲ್ಲಾ ಸದಸ್ಯರು ಸಹಕರಿಸಬೇಕಾಗಿ ಈ ಮೂಲಕ ವಿನಂತಿಸುತ್ತೇನೆ ಎಂದರು.
ಸ್ಥಳೀಯ ರಸ್ತೆಗಳ ಅಭಿವೃದ್ಧಿಗಾಗಿ ಸಾಕಷ್ಟು ಅನುದಾನ ನೀಡಲಾಗುತ್ತಿದೆ. ಕಲ್ಯಾಣ ಪಥ ಯೋಜನೆ ಮೂಲಕ ಶಾಸಕರಿಗೆ ಮತ್ತಷ್ಟು ಅವಕಾಶಗಳನ್ನು ಕಲ್ಪಿಸಲಾಗುತ್ತಿದೆ. ಇದನ್ನು ಸದ್ಬಳಕೆ ಮಾಡಿಕೊಂಡು ರಸ್ತೆಗಳನ್ನು ಅಭಿವೃದ್ಧಿಪಡಿಸುವುದು ಅವರ ಹೊಣೆಗಾರಿಕೆಯಾಗಿದೆ.
ಉದ್ಯಮ ಚಟುವಟಿಕೆಗಳಿಗಾಗಿ ಭಾರಿ ವಾಹನಗಳ ನಿರಂತರ ಓಡಾಟದಿಂದ ರಸ್ತೆಗಳು ಹದಗೆಡುವುದು ಸಹಜ. ಇದಕ್ಕೆ ಇರುವ ಪರಿಹಾರವೆಂದರೆ ಜಿಲ್ಲಾ ಪಂಚಾಯಿತಿ ರಸ್ತೆಗಳನ್ನು ಮೇಲ್ದರ್ಜೆಗೆ ಏರಿಸುವುದು. ಈ ಕುರಿತು ಶಾಸಕರು ಮನವಿ ಸಲ್ಲಿಸಬೇಕಾಗುತ್ತದೆ.
ಪಂಚಾಯಿತಿ ಅನುಮತಿಯಿಲ್ಲದೆ ಅನಧಿಕೃತ ಚಟುವಟಿಕೆ ನಡೆಸುವುದು, ರಸ್ತೆ ದುರಸ್ತಿಯಂತಹ ವಿಚಾರಕ್ಕೆ ಸಂಬಂಧಿಸಿದಂತೆ ವಿಂಡ್ ಮಿಲ್ ಕಂಪೆನಿಗಳಿಗೆ ನೋಟಿಸ್ ನೀಡಿದ್ದೇವೆ. ಸಿಎಸ್ಆರ್ ನಿಧಿಯಿಂದ ರಸ್ತೆಗಳ ಅಭಿವೃದ್ಧಿಪಡಿಸುವುದಕ್ಕಾಗಿ ಕಂಪೆನಿಗಳಿಗೆ ಸೂಚಿಸಲು ಜಿಲ್ಲಾ ಮಟ್ಟದಲ್ಲಿ ಸಭೆಗಳನ್ನು ಆಯೋಜಿಸಲು ಜಿಲ್ಲಾಧಿಕಾರಿಗಳಿಗೆ ನಿರ್ದೇಶಿಸುತ್ತೇನೆ ಎಂದರು.