ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಬರುವ ಭಕ್ತರಿಗೆ ನೀಡುವ ಅನ್ನ ಪ್ರಸಾದಕ್ಕೆ ದಕ್ಷಿಣ ಭಾರತದ ಸ್ಪರ್ಶ ನೀಡಲಾಗಿದೆ. ಮತ್ತೊಂದು ಹೊಸ ಖಾದ್ಯ ಸೇರ್ಪಡೆಗೊಂಡಿದ್ದು, ಪ್ರಸಾದದ ಮೆನುವಿನಲ್ಲಿ ಮಸಾಲೆ ವಡೆ ಸೇರಿಸಲಾಗಿದೆ.
ಗುರುವಾರ ಬೆಳಗ್ಗೆ ತಿರುಮಲದ ತಾರಿಗೊಂಡ ವೆಂಗಮಾಂಬ ಅನ್ನ ಪ್ರಸಾದ ಭವನದಲ್ಲಿ ಮಸಾಲೆ ವಡೆ ವಿತರಣೆಗೆ ಟಿಟಿಡಿ ಅಧ್ಯಕ್ಷ ಬಿ.ಆರ್. ನಾಯ್ಡು ಚಾಲನೆ ಕೊಟ್ಟರು. ಈ ವೇಳೆ ಕಾರ್ಯನಿರ್ವಾಹಕ ಅಧಿಕಾರಿ ಜೆ. ಶ್ಯಾಮಲಾ ರಾವ್ ಮತ್ತು ಹೆಚ್ಚುವರಿ ಕಾರ್ಯನಿರ್ವಾಹಕ ಅಧಿಕಾರಿ ಸಿ.ಎಚ್. ವೆಂಕಯ್ಯ ಚೌಧರಿ ಉಪಸ್ಥಿತರಿದ್ದರು.
ಟಿಟಿಡಿ ಅಧ್ಯಕ್ಷ ನಾಯ್ಡು ಅವರು ಅನ್ನ ಪ್ರಸಾದ ಮೆನುವಿನಲ್ಲಿ ದಕ್ಷಿಣ ಭಾರತದ ಖಾದ್ಯವನ್ನು ಸೇರಿಸುವ ಆಲೋಚನೆಯನ್ನು ಮೊದಲು ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರಿಗೆ ಪ್ರಸ್ತಾಪಿಸಿದಾಗ, ಅವರು ತಕ್ಷಣವೇ ಯೋಜನೆಗೆ ಅನುಮೋದನೆ ನೀಡಿದರು. ದೇವಾಲಯವು ಭಕ್ತರಿಗೆ ಪೌಷ್ಟಿಕ, ರುಚಿಕರವಾದ ಮತ್ತು ವೈವಿಧ್ಯಮಯ ಆಹಾರ ಒದಗಿಸುವುದೇ ನಮ್ಮ ಮುಖ್ಯ ಉದ್ದೇಶವಾಗಿದೆ ಎಂದು ಟಿಟಿಡಿ ಅಧ್ಯಕ್ಷ ನಾಯ್ಡು ಅವರು ತಿಳಿಸಿದ್ದಾರೆ.
ಮಸಾಲ ವಡೆ ತಯಾರಿಸಲು ಬೇಳೆ, ಹಸಿರು ಮೆಣಸಿನಕಾಯಿ, ಶುಂಠಿ, ಕರಿಬೇವು, ಕೊತ್ತಂಬರಿ ಸೊಪ್ಪು, ಪುದೀನ ಮತ್ತು ಸೋಂಪು ಪದಾರ್ಥಗಳನ್ನು ಬಳಸಲಾಗುತ್ತದೆ. ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಬರುವ ಭಕ್ತರಿಗೆ ಈ ಮಸಾಲೆ ವಡೆ ಪ್ರಸಾದವು ದೊರೆಯಲಿದೆ. ನಿತ್ಯವೂ ಬೆಳಿಗ್ಗೆ 10.30ರಿಂದ ಸಂಜೆ 4ರವರೆಗೆ 35 ಸಾವಿರ ಮಸಾಲಾ ವಡೆ ವಿತರಿಸಲು ಕ್ರಮ ಕೈಗೊಳ್ಳಲಾಗಿದೆ. ವಿಶೇಷ ಉತ್ಸವ ದಿನಗಳಲ್ಲಿ 2 ಲಕ್ಷಕ್ಕೂ ಅಧಿಕ ಭಕ್ತರಿಗೆ ಅನ್ನಪ್ರಸಾದ ವಿತರಿಸಲಾಗುತ್ತದೆ.