
ಬೆಂಗಳೂರು: ಕರಾವಳಿ ಭಾಗಕ್ಕೆ ಪ್ರತ್ಯೇಕ ಪ್ರವಾಸೋದ್ಯಮ ನೀತಿ ತರುವ ಪ್ರಸ್ತಾವನೆ ಇಲ್ಲ. ಪ್ರವಾಸೋದ್ಯಮ ನೀತಿಯಲ್ಲೇ ಕರಾವಳಿ ಭಾಗದಲ್ಲಿನ ಎಲ್ಲಾ ವರ್ಗದ ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸಲು ಅವಕಾಶಗಳನ್ನು ಕಲ್ಪಿಸಲಾಗಿದೆ ಎಂದು ಪ್ರವಾಸೋದ್ಯಮ ಸಚಿವ ಹೆಚ್.ಕೆ. ಪಾಟೀಲ್ ಹೇಳಿದ್ದಾರೆ.
ವಿಧಾನ ಮಂಡಲದ ಬಜೆಟ್ ಅಧಿವೇಶನದಲ್ಲಿ ಪ್ರಶ್ನೋತ್ತರ ಕಲಾಪದ ವೇಳೆ ಗುರುರಾಜ ಶೆಟ್ಟಿ ಘಂಟಿಹೊಳೆ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಕರಾವಳಿ ಹಾಗೂ ಕಡಲತೀರ ಪ್ರದೇಶಕ್ಕೆ ವಿಶೇಷ ಮಹತ್ವ ನೀಡಲಾಗಿದೆ ಎಂದು ಹೇಳಿದರು.
ಕರಾವಳಿ ಪ್ರವಾಸೋದ್ಯಮ ಹೆಚ್ಚು ಜನಪ್ರಿಯವಾಗಿದ್ದು, ವಾರ್ಷಿಕ 8 ಕೋಟಿ ಪ್ರವಾಸಿಗರು ಕರಾವಳಿ ಜಿಲ್ಲೆಗಳಿಗೆ ಭೇಟಿ ನೀಡುತ್ತಾರೆ. ರಾಜ್ಯದ ಕರಾವಳಿ ಭಾಗವೂ ಒಳಗೊಂಡಂತೆ ಒಟ್ಟಾರೆ ರಾಜ್ಯದ ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಕರ್ನಾಟಕ ಪ್ರವಾಸೋದ್ಯಮ ನೀತಿ 2024-29 ನ್ನು ಜಾರಿಗೆ ತರಲಾಗಿದೆ ಎಂದು ತಿಳಿಸಿದರು.
ಕರಾವಳಿ ಅಭಿವೃದ್ಧಿ ಮಂಡಳಿ ರಚನೆ ಮಾಡುತ್ತೇವೆ. ಭೂ ಬ್ಯಾಂಕ್ ಮಾಡುತ್ತೇವೆ. ಕಂಬಳಕ್ಕೆ ತಲಾ 5 ಲಕ್ಷ ರೂ. ಅನುದಾನ ನೀಡಲಾಗುತ್ತಿದೆ. 320 ಕಿ.ಮೀ. ಉದ್ದದ ಕರಾವಳಿಯಲ್ಲಿ ಪ್ರವಾಸೋದ್ಯಮ ಇಲಾಖೆ ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿದೆ. ಕರಾವಳಿ ಪ್ರವಾಸೋದ್ಯಮ ಅಭಿವೃದ್ಧಿ ಹಕ್ಕುಗಳನ್ನು ವರ್ಗಾಯಿಸಲು ಅನುವು ಮಾಡಿಕೊಡಲಾಗಿದೆ. ಸಾಹಸ, ಪರಿಸರ ಸ್ನೇಹಿ ವಸತಿ, ಸಂಸ್ಕೃತಿ ಸೇರಿದಂತೆ ಪ್ರವಾಸಿಗರಿಗೆ ಪೂರೈಸುವ ಸೌಲಭ್ಯಗಳನ್ನು ಸಮಗ್ರ ಕರಾವಳಿ ಪ್ರವಾಸೋದ್ಯಮ ವಲಯಗಳು ಒಳಗೊಂಡಿವೆ. ಕರಾವಳಿಯಲ್ಲಿ ಕನಿಷ್ಠ 10 ಬೃಹತ್ ಪ್ರವಾಸೋದ್ಯಮ ಯೋಜನೆಗಳ ಅಭಿವೃದ್ಧಿಗೆ ಯೋಜನೆ ಮಾಡಲಾಗುತ್ತಿದೆ. ಕರಾವಳಿ ಉತ್ಸವಗಳಿಗೆ ಉತ್ತೇಜನ ನೀಡಲಾಗುತ್ತಿದೆ ಎಂದು ವಿವರಿಸಿದರು.
ಕರಾವಳಿ ಕರ್ನಾಟಕದ ಯೋಜಿತ ಅಭಿವೃದ್ಧಿ ಯೋಜನೆ ಮತ್ತು ಸಿಆರ್ಝಡ್ ಮಾನದಂಡಗಳೊಂದಿಗೆ ಹೊಂದಾಣಿಕೆಗೆ ಒತ್ತು ನೀಡಲಾಗಿದೆ. ಹೀಗೆ 20 ಅಂಶಗಳ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಅಲ್ಲದೆ ಸಮುದ್ರದ ಮೇಲೆ ವಿಮಾನಗಳನ್ನು ಇಳಿಸುವ ಬಗ್ಗೆ ಚಿಂತನೆ ನಡೆದಿದ್ದು, ರಷ್ಯಾದವರು ಆಸಕ್ತಿ ತೋರಿದ್ದಾರೆ ಎಂದು ಹೇಳಿದರು.