
ಪ್ರಯಾಗ್ ರಾಜ್: ಮಹಾಕುಂಭಮೇಳಕ್ಕೆ ಪತ್ನಿ ಕರೆದುಕೊಂಡು ಬಂದಿದ್ದ ದೆಹಲಿಯ ವ್ಯಕ್ತಿಯೊಬ್ಬ ಆಕೆಯನ್ನು ಕೊಲೆ ಮಾಡಿ ಬಂಧಿತನಾಗಿದ್ದಾನೆ.
ದೆಹಲಿಯ ತ್ರಿಲೋಕಪುರಿಯ ದಂಪತಿ ಮಹಾಕುಂಭ ಉತ್ಸವದಲ್ಲಿ ಭಾಗವಹಿಸಲು ಉತ್ತರ ಪ್ರದೇಶದ ಪ್ರಯಾಗ್ ರಾಜ್ ಗೆ ಆಗಮಿಸಿದ್ದರು. ಪತ್ನಿಯೊಂದಿಗಿನ ಫೋಟೋ, ವಿಡಿಯೋಗಳನ್ನು ತೆಗೆದು ಮಕ್ಕಳಿಗೆ ಕಳುಹಿಸಿದ್ದ ಆರೋಪಿ ಜಾಲತಾಣದಲ್ಲಿಯೂ ಪೋಸ್ಟ್ ಮಾಡಿದ್ದ. ನಂತರ ಜನಸಂದಣಿಯಲ್ಲಿ ಪತ್ನಿ ಕಾಣೆಯಾಗಿರುವುದಾಗಿ ಮರುದಿನ ಹೇಳಿಕೊಂಡಿದ್ದ. ಆಕೆಗಾಗಿ ಹುಡುಕಾಟ ನಡೆಸಿರುತ್ತಿರುವುದಾಗಿ ಮಕ್ಕಳಿಗೆ ತಿಳಿಸಿದ್ದ.
ಆದರೆ, ಪ್ರಯಾಗ್ ರಾಝ್ ನ ಝಾನ್ಸಿ ಪ್ರದೇಶದ ಹೋಂ ಸ್ಟೇಯಲ್ಲಿ ಲ್ಲಿ ಫೆಬ್ರವರಿ 18ರಂದು ಪತ್ನಿಯನ್ನು ಕೊಲೆ ಮಾಡಿದ್ದ. ಝಾನ್ಸಿ ಪೊಲೀಸ್ ಠಾಣಾ ವ್ಯಾಪ್ತಿಯ ಆಜಾದ್ ನಗರ ಕಾಲೋನಿಯ ಹೋಂ ಸ್ಟೇ ಸ್ನಾನ ಗೃಹದಲ್ಲಿ ಮಹಿಳೆ ಶವ ಪತ್ತೆಯಾಗಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಬಂದಿದೆ.
ಕತ್ತು ಸೀಳಿದ ಸ್ಥಿತಿಯಲ್ಲಿ ಆಕೆಯ ಶವ ಪತ್ತೆಯಾಗಿದ್ದು. ತನಿಖೆ ಕೈಗೊಂಡಿದ್ದಾರೆ. ಆಕೆಯ ಫೋಟೋಗಳನ್ನು ಮಾಧ್ಯಮ ಮತ್ತು ಪತ್ರಿಕೆಗಳಲ್ಲಿ ಪ್ರಸಾರ ಮಾಡಿದ್ದಾರೆ. ಫೆಬ್ರವರಿ 21ರಂದು ಸಂಬಂಧಿಕರು ಆಕೆಯನ್ನು ಗುರುತಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮೃತಳನ್ನು ದೆಹಲಿಯ ತ್ರಿಲೋಕಪುರಿ ನಿವಾಸಿ ಮೀನಾಕ್ಷಿ ಎಂದು ಗುರುತಿಸಲಾಗಿದೆ. ಆಕೆಯ ಪತಿಯ ಅಶೋಕ್ ಕುಮಾರ್ ಕೊಲೆ ಮಾಡಿರುವ ಶಂಕೆ ಮೂಡಿದೆ. ಆರೋಪಿಯನ್ನು ಪತ್ತೆ ಹಚ್ಚಿದ ಪೊಲೀಸರು ಬಂಧಿಸಿದ್ದಾರೆ.
ಪೂರ್ವ ದೆಹಲಿಯ ತ್ರಿಲೋಕಪುರಿಯಲ್ಲಿ ನೈರ್ಮಲ್ಯ ಕೆಲಸಗಾರನಾಗಿರುವ ಅಶೋಕ್ ಬೇರೆ ಮಹಿಳೆಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ. ಹೀಗಾಗಿ ಅಡ್ಡಿಯಾಗಿದ್ದ ಪತ್ನಿಯನ್ನು ಕೊಲೆ ಮಾಡಲು ಮೂರು ತಿಂಗಳ ಹಿಂದೆಯೇ ನಿರ್ಧರಿಸಿದ್ದ. ಇದಕ್ಕಾಗಿ ಕುಂಭಮೇಳಕ್ಕೆ ಪತ್ನಿಯನ್ನು ಪುಸಲಾಯಿಸಿ ಕರೆದುಕೊಂಡು ಬಂದಿದ್ದ ಎನ್ನುವುದು ತನಿಖೆಯಲ್ಲಿ ಗೊತ್ತಾಗಿದೆ. ಆರೋಪಿಯನ್ನು ಬಂಧಿಸಿರುವ ಪೊಲೀಸರು ಕ್ರಮ ಜರುಗಿಸಿದ್ದಾರೆ.