ಬೆಂಗಳೂರು : ಇತರ ರಾಜ್ಯಗಳಲ್ಲಿ ತಯಾರಿಸಲಾದ ಕಳಪೆ ಔಷಧಿಗಳು ಪದೇ ಪದೇ ಕರ್ನಾಟಕದಲ್ಲಿ ಮಾರಾಟವಾಗುತ್ತಿರುವ ಕುರಿತು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವರಾದ ಜೆಪಿ ನಡ್ಡಾ ಅವರಿಗೆ ಸಚಿವ ದಿನೇಶ್ ಗುಂಡೂರಾವ್ ಪತ್ರ ಬರೆದಿದ್ದಾರೆ.
ಈ ವರ್ಷದ ಆರಂಭದಿಂದ ಫೆಬ್ರವರಿ 16ರ ನಡುವೆ, ಇತರ ರಾಜ್ಯಗಳಲ್ಲಿ ತಯಾರಾಗಿರುವ ಒಂಬತ್ತು ಔಷಧಗಳು ನಮ್ಮ ರಾಜ್ಯ ಸರ್ಕಾರದ ಪ್ರಯೋಗಾಲಯಗಳಲ್ಲಿ ಗುಣಮಟ್ಟ ಪರೀಕ್ಷೆಗಳಲ್ಲಿ ವಿಫಲವಾಗಿವೆ. ಈಗಾಗಲೇ ಪಶ್ಚಿಮ ಬಂಗಾಳ ಮೂಲದ ಪಶ್ಚಿಮ್ ಬಂಗಾ ಫಾರ್ಮಾಸ್ಯುಟಿಕಲ್ಸ್ ತಯಾರಿಸಿದ ಔಷಧಿಯನ್ನು ಬಳಸಿದ್ದ ಪರಿಣಾಮ ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ ಐವರು ತಾಯಂದಿರು ಮೃತಪಟ್ಟಿದ್ದಾರೆ.
ಮುಂದೆ ಇಂತಹ ಘಟನೆಗಳಾಗದಂತೆ ತಡೆಗಟ್ಟುವ ಮುನ್ನೆಚ್ಷರಿಕೆಯಲ್ಲಿ ನಾವು ಕಾರ್ಯ ನಿರ್ವಹಿಸುತ್ತಿದ್ದು, ಈ ಔಷಧಿಗಳು ರಾಜ್ಯದಲ್ಲಿ ಮಾರಾಟವಾಗದಂತೆ ಸಾಕಷ್ಟು ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಈ ಸಮಯದಲ್ಲಿ ಇತರ ಕಂಪನಿಗಳು ತಯಾರಿಸಿದ ಬಳಕೆಗೆ ಯೋಗ್ಯವಲ್ಲದ ಔಷಧಿಗಳ ಮಾರಾಟವನ್ನು ನಾವು ಸಹಿಸುವುದಿಲ್ಲ.
ಈ ಹಿನ್ನೆಲೆಯಲ್ಲಿ ಈ ಕಂಪನಿಗಳು ಮಾರಾಟ ಮಾಡುವ ಎಲ್ಲಾ ಉತ್ಪನ್ನಗಳನ್ನು ದೇಶದ ಮಾರುಕಟ್ಟೆಯಿಂದ ಹಿಂತೆಗೆದುಕೊಳ್ಳಬೇಕು. ಜೊತೆಗೆ ಗುಣಮಟ್ಟದ ಪರೀಕ್ಷೆಯಲ್ಲಿ ವಿಫಲವಾದ ಔಷಧಿಗಳ ಬಗ್ಗೆ ಪರಸ್ಪರ ಮಾಹಿತಿ ಹಂಚಿಕೊಳ್ಳಲು ಎಲ್ಲಾ ರಾಜ್ಯಗಳು ಮತ್ತು ಕೇಂದ್ರ ಪ್ರಯೋಗಾಲಯಗಳಿಗೆ ವ್ಯವಸ್ಥೆ ರಚಿಸಬೇಕು ಎಂದು ನಾನು ಮನವಿ ಮಾಡುತ್ತೇನೆ ಎಂದು ಪತ್ರ ಬರೆದಿದ್ದಾರೆ.