![](https://kannadadunia.com/wp-content/uploads/2025/02/kerala-theft.jpg)
ಬೆಂಗಳೂರು: ಹೆತ್ತವರಿಗೆ ಹೆಗ್ಗಣವೂ ಮುದ್ದು ಎಂಬ ಮಾತಿದೆ. ಅದರಲ್ಲೂ ತಾಯಿ ತನ್ನ ಮಗ ಎಷ್ಟೆ ಕೆಟ್ಟವನಾದರೂ, ತಪ್ಪು ದಾರಿ ಹಿಡಿದಿದ್ದರೂ ಕ್ಷಮಿಸಿ ಆತನ ಪರವಾಗಿ ಮಾತನಡುವುದನ್ನು ಕಂಡಿದ್ದೇವೆ ಕೇಳಿದ್ದೇವೆ. ಆದರೆ ಇಲ್ಲೋರ್ವ ತಾಯಿ ತನ್ನ ಮಗ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿ ತಪ್ಪು ದಾರಿ ಹಿಡಿದ ಕಾರಣಕ್ಕೆ ಆತನ ಮೃತದೇಹವೂ ತನಗೆ ಬೇಡ ಎಂದು ಬಿಟ್ಟು ಹೋದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಕೇರಳ ಮೂಲದ ಕುಖ್ಯಾತ ಕಳ್ಳ ವಿಷ್ಣು ಪ್ರಶಾಂತ್ ಎಂಬಾತ ಕೆಲ ದಿನಗಳ ಹಿಂದೆ ಬೆಂಗಳೂರಿನ ಕನಕಪುರ ರಸ್ತೆಯಲ್ಲಿರುವ ಫ್ಯಾಷನ್ ಫ್ಯಾಕ್ತರಿ ಬೇಸ್ ಮೆಂಟ್ ನಲ್ಲಿ ಕೊಳೆತ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದ. ಫ್ಯಾಷನ್ ಫ್ಯಾಕ್ಟರಿ ಸಿಬ್ಬಂದಿ ಕೋಣನಕುಂಟೆ ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕಾಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದಾಗ ಶವದ ಬಳಿ ಮೊಬೈಲ್ ಪತ್ತೆಯಾಗಿತ್ತು. ಮೊಬೈಲ್ ಕೇರಳ ಮೂಲದ ವ್ಯಕ್ತಿಯದ್ದೆಂದು ತಿಳಿದುಬಂದಿತ್ತು. ಮೊಬೈಲ್ ಮಾಲೀಕನಿಗೆ ಕರೆ ಮಾಡಿ ವಿಚಾರಿಸಿದಾಗ ಆತ ತನ್ನ ಮೊಬೈಲ್ ಕಳುವಾಗಿದೆ ಎಂದಿದ್ದಾರೆ. ಮೃತನ ಫೋಟೋವನ್ನು ಕೇರಳ ಪೊಲೀಸರಿಗೆ ಕಳುಹಿಸಿ ವಿಚಾರಿಸಿದಾಗ ಆತನ ಕೈ ಮೇಲೆ ಇದ್ದ ಟ್ಯಾಟೂ ಆಧಾರದ ಮೇಲೆ ಮೃತ ವ್ಯಕ್ತಿ ವಿಷ್ಣು ಪ್ರಶಾಂತ್. ಕೇರಳ ಮೂಲದ ಕುಖ್ಯಾತ ಕಳ್ಳ ಎಂಬುದು ಗೊತ್ತಾಗಿದೆ.
ವಿಷ್ಣು ಪ್ರಶಾಂತ್ ತಾಯಿಗೆ ಕರೆ ಮಾಡಿ ವಿಷಯ ತಿಳಿಸಿ ಮೃತದೇಹ ಕೊಂಡೊಯ್ಯುವಂತೆ ಹೇಳಿದರೆ ತಾಯಿ ಬರಲು ನಿರಾಕರಿಸಿದ್ದಾರೆ. ಖಾತರಿ ಪಡಿಸಿಕೊಳ್ಳಲು ಪೊಲೀಸರು ಒತ್ತಾಯದಿಂದ ವಿಷ್ಣು ಪ್ರಶಾಂತ್ ತಾಯಿಯನ್ನು ಬೆಂಗಳೂರಿಗೆ ಕರೆಸಿದ್ದಾರೆ. ಮೃತಪಟ್ಟವನು ತನ್ನ ಮಗ ಹೌದು. ಆದರೆ ಆತನ ಮೃತದೇಹ ಬೇಡ. ಆತ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದ. ಕೇರಳದಲ್ಲಿ ಕಲ್ಳತನ ಮಾಡಿ ಬೆಂಗಳುರಿಗೆ ಬಂದು ತಲೆಮರೆಸಿಕೊಂಡಿದ್ದ. ಮಗನ ಕಳ್ಳತನದಿಂದ ನೊಂದ ತಾಯಿ ಮೃತ ಮಗನ ಶವವೂ ತನಗೆ ಬೇಡ ಎಂದು ವಾಪಾಸ್ ಕೇರಳಕ್ಕೆ ತೆರಳಿದ್ದಾರೆ. ಬೇರೆ ದಾರಿಯಿಲ್ಲದೇ ಕೋಣನಕುಂಟೆ ಠಾಣೆ ಪೊಲೀಸರೇ ಮೃತನ ಅಂತ್ಯಸಂಸ್ಕಾರ ನೆರವೇರಿಸಿದ್ದಾರೆ.