ಬೆಂಗಳೂರು: ಶಾಲೆಗಳಲ್ಲಿ ಶಾಲಾ ಸುರಕ್ಷತೆ ಹಾಗೂ ಭದ್ರತೆ ಚಟುವಟಿಕೆ ಅನುಷ್ಠಾನಗೊಳಿಸುವಂತೆ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.
ನಗರ ಪ್ರದೇಶಗಳಲ್ಲಿ ರಚನಾತ್ಮಕ ಸುರಕ್ಷತೆ, ಆಹಾರ ಮತ್ತು ನೀರಿನ ಸುರಕ್ಷತೆ, ಸೈಬರ್ ಬಳಕೆ ಭದ್ರತೆ ಹಾಗೂ ದುರ್ಬಳಕೆ, ಕಿರುಕುಳಗಳು ಪ್ರಮುಖ ಸವಾಲುಗಳು ಮತ್ತು ಅಪಾಯಗಳಾಗಿವೆ ಮಕ್ಕಳು ಮನೆಯಿಂದ ಶಾಲೆಗೆ ಪ್ರಯಾಣಿಸುವಾಗ ಮತ್ತು ಶಾಲೆಯಿಂದ ಮನೆಗೆ ಹಿಂದಿರುಗುವಾಗ ಸುರಕ್ಷತಾ ಕ್ರಮಗಳನ್ನು ಅನುಸರಿಸಲು ಅರಿವಿನ ಅಗತ್ಯತೆ ಇರುತ್ತದೆ. ಅದ್ದರಿಂದ ಇಂತಹ ವಿಕೋಪಗಳಿಂದ ಮಕ್ಕಳನ್ನು ಸಂರಕ್ಷಿಸುವುದು ಮತ್ತು ಯಾವುದೇ ಅಪಾಯಗಳಿಗೆ ಒಳಗಾಗದಂತೆ ತಡೆಯುವ ಉದ್ದೇಶದಿಂದ ಶಾಲೆಗಳಲ್ಲಿ ಮಕ್ಕಳಿಗೆ ಶಿಕ್ಷಣ ಸೌಲಭ್ಯಗಳನ್ನು ಒದಗಿಸುವುದು ಹಾಗೂ ಈ ಕುರಿತು ಜಾಗೃತಿ ಮೂಡಿಸುವುದು ಕರ್ನಾಟಕ ಸರ್ಕಾರದ ಪ್ರಧಾನ ಕಾಳಜಿಗಳಲ್ಲಿ ಒಂದಾಗಿದೆ. ರಾಜ್ಯದಲ್ಲಿ ಜಿಲ್ಲೆ, ತಾಲ್ಲೂಕು ಮತ್ತು ಶಾಲಾ ಹಂತದವರೆಗೆ ವಿವಿಧ ಹಂತಗಳಲ್ಲಿ ಈ ಕುರಿತು ಸಾಮರ್ಥ್ಯ ಅಭಿವೃದ್ಧಿ ಕಾರ್ಯಕ್ರಮಗಳನ್ನು ಪ್ರಾರಂಭಿಸಿದೆ.
ಸಮಗ್ರ ಶಿಕ್ಷಣ ಕರ್ನಾಟಕ ಕಛೇರಿಯು ಯೂನಿಸೆಫ್ ಸಹಯೋಗದೊಂದಿಗೆ ಶಾಲಾ ಸುರಕ್ಷತೆ ಮತ್ತು ಭದ್ರತೆ ಕುರಿತು ಮೊದಲ ಹಂತದ ಅರಿವು ಮೂಡಿಸುವ ಕಾರ್ಯಾಗಾರವನ್ನು ಬೆಂಗಳೂರಿನಲ್ಲಿ ದಿನಾಂಕ:06.08.2024 ರಿಂದ ದಿನಾಂಕ:07.08.2024 ರವರೆಗೆ ಆಯೋಜಿಸಲಾಗಿತ್ತು, ಕಾರ್ಯಕ್ರಮದ ಮುಂದುವರಿದ ಭಾಗವಾಗಿ ದಿನಾಂಕ:26.11.2024 ರಿಂದ 27.11.2024 ರವರೆಗೆ ಎರಡು ದಿನಗಳ ಪುನಚ್ಚೇತನ ತರಬೇತಿಯನ್ನು ಆಯೋಜಿಸಲಾಗಿತ್ತು.
1. ಕರ್ನಾಟಕ ಸಮಗ್ರ ಶಾಲಾ ಸುರಕ್ಷತೆ ಕಾರ್ಯಕ್ರಮದ ಪ್ರಮುಖ ಉದ್ದೇಶಗಳು
ಶಾಲಾ ಸುರಕ್ಷತೆ ಹಾಗೂ ಮಕ್ಕಳ ಸುರಕ್ಷತೆಯನ್ನು ಖಚಿತಪಡಿಸುವುದು.
ಮನೆಯಿಂದ ಶಾಲೆಗೆ ಮತ್ತು ಶಾಲೆಯಿಂದ ಮನೆಗೆ ಹಿಂದಿರುಗುವಾಗ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳುವುದು.
ರಾಜ್ಯದ ಎಲ್ಲಾ ಜಿಲ್ಲೆ, ತಾಲ್ಲೂಕು ಹಾಗೂ ಕ್ಲಸ್ಟರ್ಗಗಳಲ್ಲಿ ಶಾಲೆಗಳ ಸುರಕ್ಷತಾ ಕಾರ್ಯಕ್ರಮಗಳನ್ನು ಕಾರ್ಯಗತಗೊಳಿಸಲು ವಿವಿಧ ಇಲಾಖೆಗಳ (ಸಾರ್ವಜನಿಕ ಶಿಕ್ಷಣ ಇಲಾಖೆ, ಆರೋಗ್ಯ ಇಲಾಖೆ, ಗ್ರಾಮೀಣ ಅಭಿವೃದ್ಧಿ ಇಲಾಖೆ, ಅಗ್ನಿಶಾಮಕದಳ ಮತ್ತು ತುರ್ತುಪರಿಸ್ಥಿತಿ ಸೇವೆಗಳು ಇತ್ಯಾದಿ) ಸಹಭಾಗಿತ್ವದಲ್ಲಿ ಎಲ್ಲಾ ಸಮಯದಲ್ಲೂ ಮಕ್ಕಳು ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳುವುದು.
ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲಿ ತರಬೇತುದಾರರ ಸಂಪನ್ಮೂಲ ತಂಡವನ್ನು ರಚಿಸಿಕೊಳ್ಳುವುದು ಅವರ ಮೂಲಕ ಶಾಲಾ ಸುರಕ್ಷತಾ ಕಾರ್ಯಕ್ರಮ ಕುರಿತು ನೋಡಲ್ ಅಧಿಕಾರಿಗಳು/ಶಿಕ್ಷಕರಿಗೆ ತರಬೇತಿ ನೀಡುವುದು.