ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಮತ್ತೆ ಬಿರುಗಾಳಿ ಸಹಿತ ಧಾರಾಕಾರ ಮಳೆ ಶುರುವಾಗಿದೆ. ರಾತ್ರಿಯಿಂದ ಬೆಳಿಗ್ಗೆವರೆಗೂ ನಿರಂತರವಾಗಿ ಎಡೆಬಿಡದೆ ಸುರಿದಿದ್ದ ಮಳೆ ಬೆಳಿಗ್ಗೆ ಕೆಲ ಕಾಲ ತಣ್ಣಗಾಗಿತ್ತು. ಮಧ್ಯಾಹ್ನದ ಬಳಿಕ ನಗರದಾದ್ಯಂತ ಮತ್ತೆ ಮಳೆಯ ಆರ್ಭಟ ಆರಂಭವಾಗಿದೆ.
ಮಳೆಯ ಅಬ್ಬರಕ್ಕೆ ಮತ್ತೆ ರಸ್ತೆಗಳು ಜಲಾವೃತಗೊಂಡಿದ್ದು, ಮನೆಗಳಿಗೆ ಯಥಾಪ್ರಕಾರ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ. ಬಹುತೇಕ ಪ್ರದೇಶಗಳು ಕೆರೆಯಂತೆ ಭಾಸವಾಗುತ್ತಿವೆ. ಭಾರಿ ಮಳೆಯಿಂದಾಗಿ ವಾಹನ ಸವಾರರು ರಸ್ತೆಗಳಲ್ಲೇ ವಾಹನಗಳನ್ನು ನಿಲ್ಲಿಸಿ, ಮೆಟ್ರೋ ನಿಲ್ದಾಣ, ಫ್ಲೈ ಓವರ್ ಕೆಳಗೆ ಆಶ್ರಯ ಪಡೆದಿದ್ದಾರೆ. ಮಳೆಯಿಂದಾಗಿ ಸಾಲು ಸಾಲು ಅವಾಂತರಗಳು ಸೃಷ್ಟಿಯಾಗಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ಥಗೊಂಡಿದೆ.
ಮೆಜೆಸ್ಟಿಕ್, ವಿಧಾನಸೌಧ, ಮೈಸೂರು ಬ್ಯಾಂಕ್ ಸರ್ಕಲ್, ಗುಟ್ಟಹಳ್ಳಿ, ಮಲ್ಲೇಶ್ವರಂ, ನಂಜಪ್ಪ ಸರ್ಕಲ್, ರಿಚ್ಮಂಡ್ ಸರ್ಕಲ್, ಕೆ.ಆರ್.ಮಾರ್ಕೆಟ್, ಕಾರ್ಪೊರೇಶನ್, ಚಾಲುಕ್ಯ ಸರ್ಕಲ್, ಎಂ.ಜಿ.ರಸ್ತೆ, ಕೋರಮಂಗಲ, ಶಿವಾಜಿನಗರ, ಇಂದಿರಾ ನಗರ, ಮೈಸೂರು ರಸ್ತೆ, ಆರ್.ಆರ್.ನಗರ, ಗಿರಿನಗರ, ನಾಯಂಡಹಳ್ಳಿ, ಬನಶಂಕರಿ ಸೇರಿದಂತೆ ನಗರದ ಹಲವೆಡೆ ಭಾರಿ ಮಳೆಯಾಗುತ್ತಿದೆ.