ಬೆಂಗಳೂರು: ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ನಡೆಸಿರುವ ಸಮೀಕ್ಷಾದಾರರಿಗೆ ಗೌರವಧನದ ಮೊತ್ತವನ್ನು ಪಾವತಿಸಲು ಜಿಲ್ಲಾಧಿಕಾರಿಗಳಿಗೆ ಅನುದಾನ ಬಿಡುಗಡೆ ಮಾಡಲಾಗಿದೆ.
ಪ್ರಸ್ತಾವನೆಯಲ್ಲಿ ವಿವರಿಸಿರುವಂತೆ, ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದಿಂದ ಕೈಗೊಂಡಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ಕಾರ್ಯನಿರ್ವಹಿಸಿರುವ ಸಮೀಕ್ಷಾದಾರರಿಗೆ (GBA ಹೊರತುಪಡಿಸಿ) ಅನುಬಂಧದಲ್ಲಿ ವಿವರಿಸಿರುವಂತೆ ರಾಜ್ಯದ ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಒಟ್ಟು ರೂ.1,27,73,45,200 (ನೂರ ಇಪ್ಪತ್ತೇಳು ಕೋಟಿ ಎಪ್ಪತ್ತೂರು ಲಕ್ಷಗಳ ನಲವತ್ತೈದು ಸಾವಿರದ ಇನ್ನೂರು ರೂಪಾಯಿಗಳು ಮಾತ್ರ) ಗಳನ್ನು ಈ ಕೆಳಗಿನ ಷರತ್ತುಗಳಿಗೆ ಒಳಪಟ್ಟು ಬಿಡುಗಡೆ ಮಾಡಿ ಆದೇಶಿಸಿದೆ.
ಷರತ್ತುಗಳು:
ಒಂದು ಮತ್ತು ಎರಡು ಸದಸ್ಯರಿರುವ ಮನೆಗಳನ್ನು ಸಮೀಕ್ಷೆ ಮಾಡಿರುವ ಬಗ್ಗೆ, ತಲಾ ರೂ.50/-ರಂತೆ ಹಾಗೂ ಮೂರು ಮತ್ತು ಮೂರಕ್ಕಿಂತ ಹೆಚ್ಚು ಸದಸ್ಯರಿರುವ ಮನೆಗಳನ್ನು ಸಮೀಕ್ಷೆ ಮಾಡಿರುವ ಬಗ್ಗೆ ತಲಾ ರೂ.100/- ರಂತೆ ಪಾವತಿಸುವುದು.
EDCS ನಿಂದ ಪಡೆದಿರುವಂತೆ ಸಮೀಕ್ಷಾದಾರರ ಹೆಸರು ಮತ್ತು ಅವರಿಗೆ ಪಾವತಿಸಬೇಕಾಗಿರುವ ಮೊತ್ತದ ವಿವರವನ್ನು ಜಿಲ್ಲಾವಾರು ಪ್ರತ್ಯೇಕವಾಗಿ ನೀಡಲಾಗಿದೆ.
ಸಮೀಕ್ಷೆಗೆ ಸಂಬಂಧಿಸಿದಂತೆ ಬಿಡುಗಡೆ ಮಾಡಲಾಗುವ ಅನುದಾನ ಹಾಗೂ ವೆಚ್ಚದ ವಿವರಗಳನ್ನು ಪ್ರತ್ಯೇಕವಾಗಿ ನಿರ್ವಹಿಸುವುದು ಹಾಗೂ ನಿಯಮಾನುಸಾರ ವೆಚ್ಚಗಳನ್ನು ಭರಿಸಿದ ನಂತರ ಹಣ ವಿನಿಯೋಗ ಪ್ರಮಾಣ ಪತ್ರವನ್ನು ಆಯೋಗಕ್ಕೆ ಸಲ್ಲಿಸುವುದು.
ಈ ವೆಚ್ಚವನ್ನು ಆಯೋಗದ ಠೇವಣಿ ಖಾತೆ ಲೆಕ್ಕ ಶೀರ್ಷಿಕೆ ಸಂಖ್ಯೆ: 8449-00-120-0-18-677 ಹಾಗೂ ಠೇವಣಿ ಸಂಖ್ಯೆ: 26572A010 ಗೆ ಸಮೀಕ್ಷೆಯ ಉದ್ದೇಶಕ್ಕಾಗಿ ಬಿಡುಗಡೆಯಾಗಿರುವ ಅನುದಾನದಿಂದ ಭರಿಸುವುದು ಎಂದು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಸದಸ್ಯ ಕಾರ್ಯದರ್ಶಿ ಕೆ ಎ. ದಯಾನಂದ ತಿಳಿಸಿದ್ದಾರೆ.



