ಬೆಂಗಳೂರು: ಸಂಸದ ತೇಜಸ್ವಿ ಸೂರ್ಯ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಖಾಲಿ ಟ್ರಂಕ್ ಹಿಡಿದು ಮೆಟ್ರೋದಲ್ಲಿ ಪ್ರತಿಭಟನೆ ಮಾಡಿದ್ದು, ಈ ಬಗ್ಗೆ ಮಾಜಿ ಸಂಸದ ಡಿ.ಕೆ.ಸುರೇಶ್ ಕಿಡಿಕಾರಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಡಿ.ಕೆ.ಸುರೇಶ್, ತೇಜಸ್ವಿ ಸೂರ್ಯ ಖಾಲಿ ಟ್ರಂಕ್ ನ್ನು ಹಿಡಿದು ರಾಜ್ಯ ಸರ್ಕಾರದ ವಿರುದ್ಧವಲ್ಲ, ಕೇಂದ್ರ ಸರ್ಕಾರದ ವಿರುದ್ಧವೇ ಪ್ರತಿಭಟಿಸಿದರೆ ಒಳಿತು. ಅವರು ಕೇಂದ್ರ ಸರ್ಕಾರ ಕರ್ನಾಟಕಕ್ಕೆ ಕೊಟ್ಟಿರುವ ಕೊಡುಗೆ ಖಾಲಿ ಟ್ರಂಕ್ ಎಂಬುದನ್ನು ಪರೋಕ್ಷವಾಗಿ ತೋರಿಸುತ್ತಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.
ತೇಜಸ್ವಿ ಸೂರ್ಯ ತಮ್ಮ ಬದ್ಧತೆಯನ್ನು ದೆಹಲಿಯಲ್ಲಿ ಪ್ರದರ್ಶನ ಮಾಡಬೇಕು. ಈ ಮೂಲಕ ಕರ್ನಾಟಕ್ಕೆ ಕೊಡಿಸಬೇಕಾದ ಅನುದಾನ, ತೆರಿಗೆ ಹಣವನ್ನು ಕೊಡಿಸಬೇಕು ಎಂದು ಆಗ್ರಹಿಸಿದ್ದಾರೆ.
ತೇಜಸ್ವಿ ಸೂರ್ಯ ಅವರು ಬೆಂಗಳೂರಿನಲ್ಲಿ ಖಾಲಿ ಟ್ರಂಕ್ ಹಿಡಿದು ಪ್ರತಿಭಟಿಸುವ ಬದಲು ಇದನ್ನು ದೆಹಲಿಯಲ್ಲಿ ಮಾಡಲಿ. ಕೇಂದ್ರ ಸರ್ಕಾರ ಕರ್ನಾಟಕಕ್ಕೆ ಮಾಡುತ್ತಿರುವ ಅನ್ಯಾಯದ ವಿರುದ್ಧ, ಬಜೆಟ್ ನಲ್ಲಿ ಮಾಡಿರುವ ಅನ್ಯಾಯದ ವಿರುದ್ಧ ದೆಹಲಿಯಲ್ಲಿ ಹೋರಾಡಲಿ. ಅನಗತ್ಯವಾಗಿ ಇಲ್ಲಿ ಪ್ರತಿಭಟಿಸುವ ಬದಲು ಪ್ರಧಾನಿ ಮೋದಿ ಮುಂದೆ ತೇಜಸ್ವಿ ಸೂರ್ಯ ತಮ್ಮ ಎದೆಗಾರಿಕೆ ತೋರಿಸಲಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿತ್ತ ಸಚಿವರಾದ ನಿರ್ಮಲಾ ಸೀತಾರಾಮ್ನ್ ಅವರು ಬಜೆಟ್ ನಲ್ಲಿ ರಾಜ್ಯಕ್ಕೆ ಏನು ಕೊಟ್ಟಿದ್ದಾರೆ? ಕೇಂದ್ರ ಸರ್ಕಾರ ಯಾವ ಅನುದಾನವನ್ನು ನೀಡಿದೆ? ಎಷ್ಟು ನೀಡಿದೆ? ಕರ್ನಾಟಕದ ತೆರಿಗೆ ಹಣವನ್ನು ಲೂಟಿ ಮಾಡಿ ತಾವು ಇಟ್ಟುಕೊಂಡು ಕರ್ನಾಟಕಕ್ಕೆ ಕೊಡಬೇಕಾದ ಅನುದಾನವನ್ನೂ ಕೊಡದೇ ಖಾಲಿ ಡಬ್ಬಾ ಕೊಟ್ಟಿರುವುದು ಕೇಂದ್ರ ಸರ್ಕಾರ. ಈ ಅನ್ಯಾಯವನ್ನು ಪ್ರಶ್ನೆ ಮಾಡುವುದನ್ನು ಬಿಟ್ಟು ಬೆಂಗಳೂರಿನಲ್ಲಿ ಖಾಲಿ ಟ್ರಂಕ್ ಪ್ರದರ್ಶಿಸುವ ನಾಟಕವಾಡುತ್ತಿದ್ದಾರೆ. ಕೇಂದ್ರ ಸರ್ಕಾರ ಕರ್ನಾಟಕ್ಕೆ ಕೊಟ್ಟಿದ್ದು ಖಾಲಿ ಡಬ್ಬಾ ಎಂದು ಕಿಡಿಕಾರಿದರು.

