ಬೆಂಗಳೂರು: ದಾವಣಗೆರೆ ಸರ್ಕಾರಿ ಸ್ವತ್ತುಗಳಿಗೆ ಜೀವಂತ ವ್ಯಕ್ತಿಗಳ ಹೆಸರು ನಾಮಕರಣ ವಿಚಾರಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ನಾಲ್ಕು ವಾರಗಳಲ್ಲಿ ಕ್ರಮಕ್ಕೆ ಸಕ್ಷಮ ಪ್ರಾಧಿಕಾರಕ್ಕೆ ನಿರ್ದೇಶನ ನೀಡಿದೆ.
ದಾವಣಗೆರೆಯಲ್ಲಿ ಸರ್ಕಾರಿ ಆಸ್ತಿಗಳಿಗೆ ಶಾಮನೂರು ಶಿವಶಂಕರಪ್ಪ, ಎಸ್.ಎಸ್. ಮಲ್ಲಿಕಾರ್ಜುನ ಅವರ ಹೆಸರು ನಾಮಕರಣ ಮಾಡಿರುವ ಸರ್ಕಾರದ ಕ್ರಮ ಪ್ರಶ್ನಿಸಿ ಎ.ಸಿ. ರಾಘವೇಂದ್ರ ಸಲ್ಲಿಸಿದ್ದ ಪಿಎಎಲ್ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ 4 ವಾರಗಳಲ್ಲಿ ಅರ್ಜಿದಾರರ ಮನವಿ ಪರಿಗಣಿಸಿ ತೀರ್ಮಾನಿಸಿ ಎಂದು ಆದೇಶಿಸಿದೆ.
ಸಕ್ಷಮ ಪ್ರಾಧಿಕಾರಕ್ಕೆ ಹೈಕೋರ್ಟ್ ವಿಭಾಗೀಯ ಪೀಠದಿಂದ ಈ ಕುರಿತಾಗಿ ಸೂಚನೆ ನೀಡಲಾಗಿದೆ. ಸರ್ಕಾರಿ ಸ್ವತ್ತಿಗೆ ಜೀವಂತವಿರುವವರ ಹೆಸರಿಡದಂತೆ ಹೈಕೋರ್ಟ್ ಸೂಚಿಸಿತ್ತು. ಸ್ವಂತ ಆಸ್ತಿಗೆ ಬೇಕಿದ್ದರೆ ಹೆಸರು ಇಟ್ಟುಕೊಳ್ಳಬಹುದು ಎಂದು 2012ರಲ್ಲಿ ಹೈಕೋರ್ಟ್ ಅಭಿಪ್ರಾಯ ವ್ಯಕ್ತಪಡಿಸಿತ್ತು. ಇದನ್ನೇ ಆಧರಿಸಿ ಕ್ರಮ ಕೋರಿದ ಅರ್ಜಿಯನ್ನು ಹೈಕೋರ್ಟ್ ಇತ್ಯರ್ಥಪಡಿಸಿದೆ.