‘ಅತ್ಯಾಚಾರ’ಕ್ಕೆ ಅನುಕೂಲ ಮಾಡಿಕೊಡುವ ಮಹಿಳೆ ವಿರುದ್ಧ ಗ್ಯಾಂಗ್‌ ರೇಪ್‌ ಪ್ರಕರಣ; ಅಲಹಾಬಾದ್ ಹೈಕೋರ್ಟ್ ಮಹತ್ವದ ಅಭಿಪ್ರಾಯ

ನಿಸ್ಸಂದೇಹವಾಗಿ ಮಹಿಳೆ ಅತ್ಯಾಚಾರದ ಅಪರಾಧವನ್ನು ಮಾಡಲಾರಳು, ಆದರೆ ಆಕೆ ಆ ಕೃತ್ಯವನ್ನು ಸುಗಮಗೊಳಿಸಿದರೆ ಭಾರತೀಯ ದಂಡ ಸಂಹಿತೆ (ಐಪಿಸಿ) ಸೆಕ್ಷನ್ 376 ಡಿ ಅಡಿಯಲ್ಲಿ `ಗ್ಯಾಂಗ್ ರೇಪ್’ ಅಪರಾಧಕ್ಕಾಗಿ ಕಾನೂನು ಕ್ರಮ ಜರುಗಿಸಬಹುದು ಎಂದು ಅಲಹಾಬಾದ್ ಹೈಕೋರ್ಟ್ ಹೇಳಿದೆ.

2013 ರಲ್ಲಿ ತಿದ್ದುಪಡಿ ಮಾಡಲಾದ ಅತ್ಯಾಚಾರದ ಅಪರಾಧಕ್ಕೆ ಸಂಬಂಧಿಸಿದ ಐಪಿಸಿಯ ಸೆಕ್ಷನ್ 375 (ಅತ್ಯಾಚಾರ) ಮತ್ತು 376 (ಅತ್ಯಾಚಾರಕ್ಕೆ ಶಿಕ್ಷೆ) ನಿಬಂಧನೆಗಳನ್ನು ವಿವರಿಸಿದ ನ್ಯಾಯಮೂರ್ತಿ ಶೇಖರ್ ಕುಮಾರ್ ಯಾದವ್, ಆಪಾದಿತ ಮಹಿಳೆಯ ವಿರುದ್ಧ ಕಾನೂನು ಕ್ರಮ ಜರುಗಿಸುವಂತಿಲ್ಲ ಎಂಬ ಮನವಿಯನ್ನು ತಿರಸ್ಕರಿಸಿದರು.

ಈ ಅವಲೋಕನಗಳೊಂದಿಗೆ, ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಸಿದ್ಧಾರ್ಥ್ ಅವರು ನೀಡಿದ ಸಮನ್ಸ್ ಆದೇಶವನ್ನು ಪ್ರಶ್ನಿಸಿ ಸುನೀತಾ ಪಾಂಡೆ ಎಂಬವರು ಸಿಆರ್‌ಪಿಸಿ ಸೆಕ್ಷನ್ 482ರ ಅಡಿಯಲ್ಲಿ ಸಲ್ಲಿಸಿದ ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿದೆ. 15 ವರ್ಷದ ಬಾಲಕಿಯ ಮೇಲಿನ ಆಪಾದಿತ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಐಪಿಸಿ ಸೆಕ್ಷನ್ 376D (ಗ್ಯಾಂಗ್ ರೇಪ್), 212ರ (ಅಪರಾಧಿಗಳಿಗೆ ಆಶ್ರಯ ನೀಡುವುದು) ಅಡಿಯಲ್ಲಿ ವಿಚಾರಣೆಯನ್ನು ಎದುರಿಸಬೇಕಾಗುತ್ತದೆ.

ಮಹಿಳೆ ಅತ್ಯಾಚಾರದ ಅಪರಾಧವನ್ನು ಮಾಡಲು ಸಾಧ್ಯವಿಲ್ಲ. ಆದರೆ ಆಕೆ ಆರೋಪಿಗಳ ಜೊತೆಗೂಡಿ ಅತ್ಯಾಚಾರದ ಕೃತ್ಯವನ್ನು ಸುಗಮಗೊಳಿಸಿದರೆ, ತಿದ್ದುಪಡಿ ಮಾಡಲಾದ ನಿಬಂಧನೆಗಳ ದೃಷ್ಟಿಯಿಂದ ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರದ ಮೊಕದ್ದಮೆ ಹೂಡಬಹುದು ಎಂದು ನ್ಯಾಯಾಲಯವು ಅಭಿಪ್ರಾಯಪಟ್ಟಿದೆ.

ಪ್ರಕರಣದ ವಾಸ್ತವಾಂಶಗಳನ್ನು ಗಣನೆಗೆ ತೆಗೆದುಕೊಂಡು, ಅತ್ಯಾಚಾರದ ಅಪರಾಧಕ್ಕೆ ಸಂಬಂಧಿಸಿದ ಸೆಕ್ಷನ್‌ಗಳ ತಿದ್ದುಪಡಿ ಮಾಡಲಾದ ನಿಬಂಧನೆಗಳ ಪ್ರಕಾರ ಸಾಮೂಹಿಕ ಅತ್ಯಾಚಾರಕ್ಕಾಗಿ ಮಹಿಳೆಯ ಮೇಲೆ ಕಾನೂನು ಕ್ರಮ ಜರುಗಿಸಲಾಗುವುದಿಲ್ಲ ಎಂಬ ವಾದವು ಸರಿಯಾಗಿಲ್ಲ ಎಂಬುದನ್ನೂ ನ್ಯಾಯಾಲಯ ಗಮನಿಸಿದೆ.

ಐಪಿಸಿಯ ಸೆಕ್ಷನ್ 375 ರ ದ್ವಂದ್ವಾರ್ಥವಲ್ಲದ ಭಾಷೆಯಿಂದ ಮಹಿಳೆಯು ಅತ್ಯಾಚಾರ ಮಾಡುವಂತಿಲ್ಲ ಎಂಬುದು ಸ್ಪಷ್ಟವಾಗಿದ್ದರೂ, ಈ ಸೆಕ್ಷನ್ ನಿರ್ದಿಷ್ಟವಾಗಿ ಕೇವಲ ಪುರುಷ ಅತ್ಯಾಚಾರ ಮಾಡಬಹುದು ಮತ್ತು ಮಹಿಳೆಯಲ್ಲ ಎಂಬುದನ್ನು ಹೇಳುತ್ತದೆ. ಆದರೆ ಈ ಪ್ರಕರಣವು ವಿಭಿನ್ನವಾಗಿದೆ. 2015ರ ಜೂನ್‌ನಲ್ಲಿ ನಡೆದಿರುವ ಪ್ರಕರಣ ಇದು. ಸಂತ್ರಸ್ಥೆಯ ಅಪಹರಣ, ಮದುವೆಗೆ ಒತ್ತಡ ಸೇರಿದಂತೆ ಅನೇಕ ರೀತಿಯ ಆರೋಪಗಳನ್ನು ತಂದೆ ಮಾಡಿದ್ದರು. 15 ವರ್ಷ ಪ್ರಾಯದ ಮಗಳನ್ನು ಯಾರೋ ಆಮಿಷವೊಡ್ಡಿ ಕರೆದುಕೊಂಡು ಹೋಗಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಿದ್ದರು.

ಸಿಆರ್‌ಪಿಸಿ 164ರ ಅಡಿಯಲ್ಲಿ ನ್ಯಾಯಾಲಯದ ಮುಂದೆ ನೀಡಿದ ಹೇಳಿಕೆಯಲ್ಲಿ, ಅರ್ಜಿದಾರರು ಆಪಾದಿತ ಘಟನೆಯಲ್ಲಿ ಭಾಗಿಯಾಗಿದ್ದಾರೆ ಎಂದು ಸಂತ್ರಸ್ತೆ ಹೇಳಿದ್ದಾರೆ. ಆದರೆ ಆರೋಪಪಟ್ಟಿಯಲ್ಲಿ ಅರ್ಜಿದಾರರ ಹೆಸರಿಲ್ಲ. ಬಳಿಕ ಸಂತ್ರಸ್ತೆಯ ತಂದೆ ಅರ್ಜಿದಾರಿಗೆ ಸಮನ್ಸ್‌ ನೀಡುವಂತೆ ಸೆಕ್ಷನ್ 319ರ ಅಡಿಯಲ್ಲಿ ಅರ್ಜಿ ಸಲ್ಲಿಸಿದರು. ಕೆಳನ್ಯಾಯಾಲಯ ಇದನ್ನು ಅಂಗೀಕರಿಸಿತ್ತು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read