ಶಿವಮೊಗ್ಗ: ಆಧ್ಯಾತ್ಮ ಮತ್ತು ಧ್ಯಾನದ ಬಗ್ಗೆ ತರಬೇತಿ ನೀಡಿ ಶಾಂತಿ, ಪ್ರೀತಿ, ಏಕತೆ, ಸದ್ಭಾವನೆಯನ್ನು ಜನರಲ್ಲಿ ಮೂಡಿಸಲಾಗುತ್ತಿದೆ ಎಂದು ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದ ಸಂಚಾಲಕಿ ಅನಸೂಯ ಅಕ್ಕ ಹೇಳಿದರು.
ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದ ನವುಲೆ ಸೇವಾ ಕೇಂದ್ರದ ವತಿಯಿಂದ ಭಾನುವಾರ ಆಯೋಜಿಸಿದ್ದ ವಿಶ್ವ ಬಂಧುತ್ವ ದಿನ ಹಾಗೂ ಬೃಹತ್ ರಕ್ತದಾನ ಅಭಿಯಾನದಲ್ಲಿ ಮಾತನಾಡಿ, ಆಧ್ಯಾತ್ಮ ಮೌಲ್ಯಗಳನ್ನು ವಿಶ್ವಾದ್ಯಂತ ಬಿತ್ತರಿಸುತ್ತಿದೆ ಎಂದು ತಿಳಿಸಿದರು.
ವಿಶ್ವ ಬಂಧುತ್ವ ದಿನದ ಅಂಗವಾಗಿ ಭಾರತ ಮತ್ತು ನೇಪಾಳ ಸೇರಿ ಒಂದು ಲಕ್ಷಕ್ಕೂ ಹೆಚ್ಚು ಯೂನಿಟ್ ರಕ್ತದಾನ ಮಾಡುವ ಯೋಜನೆ ಹಮ್ಮಿಕೊಳ್ಳಲಾಗಿದೆ. ಬ್ರಹ್ಮಕುಮಾರಿಸ್ ಸಂಸ್ಥೆಯ ಪೂರ್ವ ಮುಖ್ಯ ಆಡಳಿತಾಧಿಕಾರಿ ದಾದಿ ಪ್ರಕಾಶ ಮಣಿ ಜೀ ಅವರ 18ನೇ ಪುಣ್ಯ ತಿಥಿಯನ್ನು ವಿಶ್ವ ಬಂಧುತ್ವ ದಿನ ಎಂದು ಆಚರಿಸಲಾಗುತ್ತಿದೆ. ಆಗಸ್ಟ್ 22 ರಿಂದ 25ರವರೆಗೆ ಭಾರತ ಮತ್ತು ನೇಪಾಳದ 1,500ಕ್ಕೂ ಹೆಚ್ಚು ಬ್ರಹ್ಮಕುಮಾರಿ ಸೇವಾ ಕೇಂದ್ರಗಳಲ್ಲಿ ನೂರು ಗಂಟೆಗಳಲ್ಲಿ 1 ಲಕ್ಷ ಯೂನಿಟ್ ರಕ್ತ ಸಂಗ್ರಹಿಸಿ ಸಾರ್ವಜನಿಕರ ಆರೋಗ್ಯಕ್ಕಾಗಿ ನೀಡುವ ಗುರಿ ಹೊಂದಲಾಗಿದೆ. ಗಿನ್ನಿಸ್ ವಿಶ್ವ ದಾಖಲೆ ಸ್ಥಾಪಿಸಲಾಗುವುದು ಎಂದು ಹೇಳಿದರು.
ನವುಲೆ ಶಾಖೆ ಸಂಚಾಲಕಿ ಬಿ.ಕೆ.ಸ್ವಾತಿ ಅಕ್ಕ ಮಾತನಾಡಿ, ರಕ್ತ ಶರೀರಕ್ಕೆ ಶಕ್ತಿ. ಆಧ್ಯಾತ್ಮ ಆತ್ಮಕ್ಕೆ ಶಕ್ತಿ ನೀಡುತ್ತದೆ. ಒಂದು ತಿಂಗಳಿನಿಂದ ವಿವಿಧ ಸಂಘ ಸಂಸ್ಥೆ ಹಾಗೂ ಕಾಲೇಜುಗಳಲ್ಲಿ ರಕ್ತದಾನದ ಬಗ್ಗೆ ಜಾಗೃತಿ ಮೂಡಿಸಿ ಸಹಕಾರ ಕೋರಲಾಗಿದೆ ಎಂದು ತಿಳಿಸಿದರು.
ರಕ್ತದಾನಿಗಳಿಗೆ ಪ್ರಮಾಣ ಪತ್ರ ಹಾಗೂ ನೆನಪಿನ ಕಾಣಿಕೆಗಳನ್ನು ನೀಡಲಾಯಿತು. ಜಿಲ್ಲಾ ಮೆಗಾನ್ ಬೋಧನಾ ಆಸ್ಪತ್ರೆಯ ವೈದ್ಯೆ ಡಾ. ಗೀತಾ ಲಕ್ಷ್ಮೀ ಅವರು ರಕ್ತದಾನದ ಮಹತ್ವ ಹಾಗೂ ರಕ್ತದಾನದಿಂದ ಆಗುವ ಪ್ರಯೋಜನಗಳ ಬಗ್ಗೆ ಮಾಹಿತಿ ನೀಡಿದರು.
ರೋಟರಿ ಮಾಜಿ ಸಹಾಯಕ ಗವರ್ನರ್ ಜಿ.ವಿಜಯಕುಮಾರ್ ಮಾತನಾಡಿ, ರಕ್ತದಾನದಿಂದ ಹೃದಯಾಘಾತ ಪ್ರಮಾಣ ಕಡಿಮೆಯಾಗುತ್ತದೆ. ಆರೋಗ್ಯಕ್ಕೂ ಅನುಕೂಲಗಳಿವೆ. ಮೂಢನಂಬಿಕೆಯಿಂದ ಹೊರಬಂದು ರಕ್ತದಾನ ಮಾಡಬೇಕು ಎಂದು ತಿಳಿಸಿದರು.
ಮೇರಾ ಯುವ ಭಾರತ್ ಶಿವಮೊಗ್ಗ ಸಂಸ್ಥೆಯ ಜಿಲ್ಲಾ ಯುವ ಅಧಿಕಾರಿ ಸ್ನೇಹಲತಾ, ಎಂ.ರಮೇಶ್, ಜೆಎನ್ಎಸ್ಸಿಇ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಅರುಣ್ ಕುಮಾರ್, ಜಿಲ್ಲಾ ಬೋಧನಾ ಆಸ್ಪತ್ರೆಯ ಹನುಮಂತಪ್ಪ, ಡಾ. ವೈಶಾಕ್, ಡಾ. ದಿಲೀಪ್ರಿಯ, ಮಂಜು, ರಾಜು, ಸಿಬ್ಬಂದಿ, ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯದ ಸದಸ್ಯರು, ಸಂಚಾಲಕರು, ರಕ್ತದಾನಿಗಳು ಉಪಸ್ಥಿತರಿದ್ದರು.