ಬೆಂಗಳೂರು: ಎಂಜಿನಿಯರಿಂಗ್ ಮೂರನೇ ಅಥವಾ ಅಂತಿಮ ಸುತ್ತಿನಲ್ಲಿ ಸೀಟು ಹಂಚಿಕೆಯಾಗಿದ್ದರೂ 350ಕ್ಕೂ ಅಧಿಕ ವಿದ್ಯಾರ್ಥಿಗಳು ಸಂಬಂಧಿಸಿದ ಕಾಲೇಜುಗಳಲ್ಲಿ ಪ್ರವೇಶ ಪಡೆಯದ ಹಿನ್ನೆಲೆಯಲ್ಲಿ ಆ ಎಲ್ಲ ವಿದ್ಯಾರ್ಥಿಗಳಿಗೆ ನೋಟಿಸ್ ನೀಡಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ(ಕೆಇಎ) ಮುಂದಾಗಿದೆ.
ಆ ವಿದ್ಯಾರ್ಥಿಗಳು ಬೇರೆ ಕಾಲೇಜುಗಳಲ್ಲಿ ಕಾಮೆಡ್ –ಕೆ, ಮ್ಯಾನೇಜ್ಮೆಂಟ್ ಸೀಟಿಗೆ ಪ್ರವೇಶ ಪಡೆದುಕೊಂಡಿದ್ದರೆ ಅದನ್ನು ಮಾನ್ಯ ಮಾಡದಂತೆ ಈಗಾಗಲೇ ಬೆಳಗಾವಿಯ ವಿಟಿಯುಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಪತ್ರ ಬರೆದಿದ್ದು, ಅಂತಹ ವಿದ್ಯಾರ್ಥಿಗಳಿಗೆ ನೋಟಿಸ್ ನೀಡಲು ಕ್ರಮ ಕೈಗೊಂಡಿದೆ.
ಸರ್ಕಾರಿ ಕೋಟಾ ಸೀಟು ಸಿಕ್ಕರೂ ಪ್ರವೇಶ ಪಡೆದುಕೊಳ್ಳದ ವಿದ್ಯಾರ್ಥಿಗಳು ಬೇರೆ ಕಾಲೇಜುಗಳಿಗೆ ಮ್ಯಾನೇಜ್ಮೆಂಟ್ ಸೀಟಿಗೆ ದಾಖಲಾಗಿದ್ದಾರೆಯೇ ಅಥವಾ ಬೇರೆ ಕೋರ್ಸ್ ಗಳಿಗೆ ಪ್ರವೇಶ ಪಡೆದಿದ್ದಾರೆಯೇ ಇನ್ಯಾವ ಕಾರಣಕ್ಕೆ ಸೀಟು ಸಿಕ್ಕರೂ ಪ್ರವೇಶ ಪಡೆದುಕೊಂಡಿಲ್ಲ ಎನ್ನುವುದನ್ನು ಪತ್ತೆ ಮಾಡಲು ಪ್ರಾಧಿಕಾರ ಮುಂದಾಗಿದೆ. ಎಚ್ಚರಿಕೆಯಿಂದ ಕೌನ್ಸೆಲಿಂಗ್ ನಡೆಸಿದರೂ ಕಳೆದ ಸಾಲಿನಂತೆ ಈ ಬಾರಿ ಸೀಟು ಬ್ಲಾಕಿಂಗ್ ಜಾಲವೇನಾದರೂ ಸಿಇಟಿ ವಿದ್ಯಾರ್ಥಿಗಳ ಹೆಸರಲ್ಲಿ ಅಕ್ರಮ ಆಪ್ಷನ್ ಎಂಟ್ರಿ ನಡೆಸಿ ಕಳ್ಳಾಟ ಆಡಿದೆಯೇ ಎನ್ನುವುದನ್ನು ಪತ್ತೆಹಚ್ಚಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಕ್ರಮ ಕೈಗೊಂಡಿದೆ. ಈ ಹಿನ್ನೆಲೆಯಲ್ಲಿ 350ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ನೋಟಿಸ್ ನೀಡಲಾಗುವುದು. ಮೂರನೇ ಸುತ್ತಿನಲ್ಲಿ ಹಂಚಿಕೆಯಾದ ಸೀಟಿಗೆ ಪ್ರವೇಶ ಪಡೆಯುವುದು ಕಡ್ಡಾಯವಾಗಿದ್ದರೂ ಯಾವ ಕಾರಣಕ್ಕೆ ಪ್ರವೇಶ ಪಡೆದಿಲ್ಲ ಎನ್ನುವುದನ್ನು ವಿದ್ಯಾರ್ಥಿಗಳಿಂದ ವಿವರಣೆ ಪಡೆದುಕೊಳ್ಳಲಾಗುವುದು. ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎನ್ನಲಾಗಿದೆ.