ವಯಸ್ಕರ ನಡುವಿನ ಸಂಬಂಧ ಲೈಂಗಿಕ ದೌರ್ಜನ್ಯವನ್ನು ಸಮರ್ಥಿಸುವುದಿಲ್ಲ: ಬಾಂಬೆ ಹೈಕೋರ್ಟ್ ಮಹತ್ವದ ಅಭಿಪ್ರಾಯ

ವಯಸ್ಸಿನಲ್ಲಿರುವ ಗಂಡು ಹೆಣ್ಣಿನ ಸಂಬಂಧ ಲೈಂಗಿಕ ದೌರ್ಜನ್ಯವನ್ನು ಸಮರ್ಥಿಸುವುದಿಲ್ಲ ಎಂದು ಬಾಂಬೆ ಹೈಕೋರ್ಟ್ ಹೇಳಿದೆ. ಸಂಗಾತಿಯ ಮೇಲೆ ಬಲವಂತದ ಲೈಂಗಿಕ ದೌರ್ಜನ್ಯವನ್ನು ಅವರಿಬ್ಬರ ನಡುವಿನ ಸಂಬಂಧದ ಕಾರಣದಿಂದಾಗಿ ಸಮರ್ಥಿಸಲಾಗುವುದಿಲ್ಲ ಎಂದು ಪ್ರಕರಣವೊಂದರ ವಿಚಾರಣೆ ನಡೆಸಿದ ಕೋರ್ಟ್ ಅಭಿಪ್ರಾಯಪಟ್ಟಿದೆ.

ಮದುವೆಯ ನೆಪದಲ್ಲಿ ತನ್ನ ನೆರೆಮನೆಯ ಮಹಿಳೆ ಮೇಲೆ ಅತ್ಯಾಚಾರ ಎಸಗಿದ ವ್ಯಕ್ತಿಯ ವಿರುದ್ಧದ ಎಫ್‌ಐಆರ್ ಅನ್ನು ರದ್ದುಗೊಳಿಸಲು ನಿರಾಕರಿಸಿ ಕೋರ್ಟ್ ಈ ಆದೇಶ ನೀಡಿದೆ.

ಪ್ರಕರಣದ ಪ್ರಕಾರ ತನ್ನ ಪತಿಗೆ ವಿಚ್ಛೇದನ ನೀಡಿದ್ದ ಮಹಿಳೆ ತನ್ನ ನಾಲ್ಕು ವರ್ಷದ ಮಗನೊಂದಿಗೆ ಸತಾರಾದ ಕರಡ್‌ನಲ್ಲಿ ವಾಸಿಸುತ್ತಿದ್ದಳು. ಆಕೆಯ ಪೋಷಕರು 2021 ರಲ್ಲಿ ಕೋವಿಡ್ ಸಮಯದಲ್ಲಿ ನಿಧನರಾಗಿದ್ದರು. ಆರೋಪಿ, ಮಹಿಳೆಯ ನೆರೆಮನೆಯಲ್ಲಿ ಬಾಡಿಗೆಗೆ ವಾಸಿಸುತ್ತಿದ್ದ. ಈ ವೇಳೆ ಇಬ್ಬರೂ ಪರಿಚಿತರಾಗಿ ಆತ್ಮೀಯರಾದ ಬಳಿಕ ಮಹಿಳೆಯನ್ನು ಮದುವೆಯಾಗುವುದಾಗಿ ಆರೋಪಿ ಭರವಸೆ ನೀಡಿದ್ದ.

ಮಹಿಳೆಯ ನಿರಂತರ ನಿರಾಕರಣೆಯ ಹೊರತಾಗಿಯೂ, ಅವನು ಜುಲೈ 2022 ರಲ್ಲಿ ಅವಳ ಮೇಲೆ ಅತ್ಯಾಚಾರವೆಸಗಿದ. ಆಕೆಯನ್ನು ತನ್ನ ಹೆತ್ತವರಿಗೂ ಪರಿಚಯಿಸಿದ್ದನು. ಆದರೆ ಬಳಿಕ ಆರೋಪಿ ಮಹಿಳೆಯಿಂದ ದೂರವಿರಲು ಪ್ರಾರಂಭಿಸಿದನು. ಮದುವೆಯ ಬಗ್ಗೆ ಆಕೆ ಆರೋಪಿಯ ಪೋಷಕರನ್ನು ಕೇಳಿದಾಗ, ಅವರು ನೀನು ಬೇರೆ ಜಾತಿಗೆ ಸೇರಿದವಳಾಗಿರುವುದರಿಂದ ಮದುವೆಯ ಪ್ರಶ್ನೆಯೇ ಇಲ್ಲ ಎಂದು ನಿಂದಿಸಿದ್ದಾರೆ. ಆರೋಪಿಯೂ ಸಹ ಮಹಿಳೆ ಮೇಲೆ ದೌರ್ಜನ್ಯ ಎಸಗಿದ್ದು ಆಕೆಯ ಮಗನನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ಸಂತ್ರಸ್ತೆ ಹೇಳಿದ್ದಾರೆ.

ಆರೋಪಿ ಪರ ವಕೀಲರು ಮಹಿಳೆ ಈಗಾಗಲೇ ಮದುವೆಯಾಗಿರುವುದರಿಂದ ಮದುವೆಯ ಪ್ರಶ್ನೆಯೇ ಇಲ್ಲ ಎಂದು ಪ್ರತಿಪಾದಿಸಿದರು. ಅಲ್ಲದೆ, 13 ತಿಂಗಳ ವಿಳಂಬದ ನಂತರ ಎಫ್‌ಐಆರ್ ದಾಖಲಿಸಲಾಗಿದೆ. ವಯಸ್ಕ ಪಾಲುದಾರರ ನಡುವಿನ ಲೈಂಗಿಕ ಸಂಬಂಧವು ಅತ್ಯಾಚಾರವಲ್ಲ ಎಂದು ವಕೀಲರು ಪ್ರತಿಪಾದಿಸಿದರು. ಪಾಲುದಾರರ ನಡುವಿನ ಲೈಂಗಿಕ ಸಂಬಂಧವು ಮದುವೆಯಲ್ಲಿ ಕೊನೆಗೊಳ್ಳದಿದ್ದರೂ ಯಾವುದೇ ತಪ್ಪು ಇಲ್ಲ ಎಂದು ವಕೀಲರು ವಾದಿಸಿದರು.

ಮಹಿಳೆಯ ಪರ ವಕೀಲರು ಲೈಂಗಿಕ ದೌರ್ಜನ್ಯದ ವೈದ್ಯಕೀಯ ಕಾನೂನು ಪರೀಕ್ಷೆಯ ವರದಿಯಲ್ಲಿರುವಂತೆ “ಬಲವಂತದ ಲೈಂಗಿಕ ಸಂಭೋಗವನ್ನು ತಳ್ಳಿಹಾಕಲು ಸಾಧ್ಯವಿಲ್ಲ” ಎಂದಿದ್ದಾರೆ. ಅನ್ಯೋನ್ಯ ಸಂಬಂಧವಿದ್ದರೂ ಬಲವಂತವಾಗಿ ಲೈಂಗಿಕ ಸಂಭೋಗ ನಡೆಸಿರುವುದಾಗಿ ಎಫ್‌ಐಆರ್‌ನಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ ಎಂದು ಪೀಠ ಹೇಳಿದೆ.

ನ್ಯಾಯಮೂರ್ತಿಗಳಾದ ಅಜೇಯ್ ಗಡ್ಕರಿ ಮತ್ತು ನೀಲಾ ಗೋಖಲೆ ಅವರ ಪೀಠವು ಮಹಿಳೆಯ ಕಡೆಯಿಂದ ನಿರಂತರವಾಗಿ ಒಪ್ಪಿಗೆ ಇರಲಿಲ್ಲ ಎಂದು ಎಫ್‌ಐಆರ್ ನಿರ್ದಿಷ್ಟಪಡಿಸುತ್ತದೆ ಎಂದು ಹೇಳಿದೆ. ದೂರುದಾರ ಮಹಿಳೆ ಆರೋಪಿಯೊಂದಿಗೆ ಮದುವೆಯಾಗಲು ಬಯಸಿದ್ದರೇ ಹೊರತು ಖಂಡಿತವಾಗಿಯೂ ಲೈಂಗಿಕ ಸಂಬಂಧದಲ್ಲಿ ತೊಡಗಿಸಿಕೊಳ್ಳಲು ಒಲವು ತೋರಿರಲಿಲ್ಲ ಎಂದು ಆರೋಪಗಳು ತಿಳಿಸಿದೆ. ಎಫ್‌ಐಆರ್‌ನಲ್ಲಿನ ಆರೋಪಗಳು ಅಪರಾಧವನ್ನು ಸ್ಪಷ್ಟಪಡಿಸಿದೆ ಎಂದು ಹೈಕೋರ್ಟ್ ಹೇಳಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read