ಪಿಎಸ್ಐ ಕಿರುಕುಳಕ್ಕೆ ನೊಂದು ಆತ್ಮಹತ್ಯೆಗೆ ಯತ್ನಿಸಿದ್ದ ವ್ಯಕ್ತಿ ಸಾವು

ಕಾರವಾರ: ಪಿಎಸ್ಐ ಕಿರಿಕುಳಕ್ಕೆ ನೊಂದು ಪೊಲೀಸ್ ಠಾಣೆ ಎದುರೇ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ ವ್ಯಕ್ತಿಯೋರ್ವ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿರುವ ದಾರುಣ ಘಟನೆ ನಡೆದಿದೆ.

ಭಾಸ್ಕರ್ ಬೋಂಡೆಲ್ಕರ್ ಮೃತ ದುರ್ದೈವಿ. ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನ ರಾಮನಗರದ ಹನುಮಾನ್ ಗಲ್ಲಿಯ ನಿವಾಸಿ. ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ರಾಮನಗರ ಪಿಎಸ್ಐ ಬಸವರಾಜ್ ವಿರುದ್ಧ ಭಾಸ್ಕರ್ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ದೂರು ನೀಡಿದ್ದರು. ಇದರಿಂದ ಕೋಪಗೊಂಡಿದ್ದ ಬಸವರಾಜ್, ಭಾಸ್ಕರ್ ಅವರಿಗೆ ನಿರಂತರವಾಗಿ ಕಿರುಕುಳ ನೀಡಲು ಆರಂಭಿಸಿದ್ದರು ಎಂಬ ಆರೋಪ ಕೇಳಿಬಂದಿದೆ.

ಪಿಎಸ್ಐ ಬಸವರಾಜ್ ಕಿರುಕುಳಕ್ಕೆ ಬೇಸತ್ತು ಭಾಸ್ಕರ್ ರಾಮನಗರ ಬಿಟ್ಟು ಜೋಯಿಡಾದಲ್ಲಿ ಕೆಲಸಕ್ಕೆ ಸೇರಿದ್ದರು. ಆದರೂ ಪಿಎಸ್ಐ ಕಿರುಕುಳ ನಿಂತಿಲ್ಲ ಎನ್ನಲಾಗಿದೆ. ಜಮೀನು ವಿಚಾರವಾಗಿ ಪೊಲೀಸರು ಭಾಸ್ಕರ್ ಅವರ ಮಾವ ಗಣಪತಿ ಎಂಬುವವರಿಗೆ ನೋಟಿಸ್ ನೀಡಿದ್ದರು. ವಿಷಯ ತಿಳಿದು ಬೇಸರಗೊಂಡಿದ್ದ ಭಾಸ್ಕರ್, ಈಗ ತನ್ನ ಮಾವನಿಗೂ ತೊಂದರೆ ಕೊಡಲು ಶುರುಮಾಡಿದರಲ್ಲ ಎಂದು ಪೊಲೀಸ್ ಠಾಣೆಗೆ ಹೋಗಿ ಪ್ರಶ್ನಿಸಿದ್ದರು. ಈ ವೇಳೆ ಪೊಲೀಸರು ಹಾಗೂ ಭಾಸ್ಕರ್ ನಡುವೆ ಮಾತಿಗೆ ಮಾತು ಬೆಳೆದಿದೆ. ಕುಡಿದು ಬಂದು ಪೊಲೀಸ್ ಠಾಣೆಯಲ್ಲಿ ಗಲಾಟೆ ಮಾಡುತ್ತಿದ್ದೀಯಾ ಎಂದು ಹಲ್ಲೆ ನಡೆಸಿದ್ದರು. ಅಲ್ಲದೇ ಬೈಕ್ ಕೀ ವಶಕ್ಕೆ ಪಡೆದು ಬೇರೆಯವರಿಗೆ ಹೇಳಿ ಗಾಡಿ ತೆಗೆದುಕೊಂಡು ಹೋಗು ಎಂದು ಬೈದಿದ್ದರು ಎನ್ನಲಾಗಿದೆ.

ಇದರಿಂದ ಮನನೊಂದ ಭಾಸ್ಕರ್ ಪೊಲೀಸ್ ಠಾಣೆ ಎದುರೇ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದರು. ತಕ್ಷಣ ಪೊಲೀಸರು ಬೆಂಕಿ ನಂದಿಸಿ ಭಾಸ್ಕರ್ ನನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಭಾಸ್ಕರ್ ಅರ್ಧ ದೇಹವೇ ಸುಟ್ಟುಹೋಗಿತ್ತು. ಭಾಸ್ಕರ್ ನನ್ನು ಬೆಳಗಾವಿ ಕೆ ಎಲ್ ಇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಭಾಸ್ಕರ್ ಮೃತಪಟ್ಟಿದ್ದಾರೆ. ರೊಚ್ಚಿಗೆದ್ದಿರುವ ಭಾಸ್ಕರ್ ಕುಟುಂಬ ಹಾಗೂ ಸಂಬಂಧಿಕರು ಪೊಲೀಸರ ವಿರುದ್ಧ ಪ್ರತಿಭಟನೆಗೆ ಮುಂದಾಗಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read