ಪ್ರಧಾನಿ ಮೋದಿಯವರಿಂದ ʼಸಿಂದೂರʼ ಗಿಡ ನೆಟ್ಟು ಪರಿಸರ ದಿನ ಆಚರಣೆ: ಕುಚ್‌ನ ವೀರ ಮಹಿಳೆಯರಿಗೆ ವಿಶೇಷ ಗೌರವ | Watch

ವಿಶ್ವ ಪರಿಸರ ದಿನದಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ತಮ್ಮ ದೆಹಲಿಯ ನಿವಾಸದಲ್ಲಿ ಸಿಂದೂರ ಗಿಡವನ್ನು ನೆಟ್ಟರು. ಇತ್ತೀಚೆಗೆ ಗುಜರಾತ್‌ನ ಕುಚ್‌ಗೆ ಭೇಟಿ ನೀಡಿದ್ದಾಗ ಅಲ್ಲಿನ ವೀರ ಮಹಿಳೆಯರು (ವಿರಾಂಗಣರು) ನೀಡಿದ್ದ ಸಿಂದೂರ ಸಸಿಯನ್ನು ನೆಡುವ ಮೂಲಕ ಪ್ರಧಾನಿ ತಮ್ಮ ಭರವಸೆಯನ್ನು ಈಡೇರಿಸಿದ್ದಾರೆ.

1971ರ ಯುದ್ಧದಲ್ಲಿ ಅಸಾಧಾರಣ ಧೈರ್ಯ ತೋರಿದ ಈ ಮಹಿಳೆಯರು, ಭಾರತೀಯ ಸೇನೆಗೆ ಸಹಾಯ ಮಾಡಲು ಮಧಾಪುರ್ ಗ್ರಾಮದ ವಾಯುನೆಲೆಯನ್ನು ಮರುನಿರ್ಮಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಮೇ 26ರಂದು ಭುಜ್‌ನಲ್ಲಿ ನಡೆದ ಸಾರ್ವಜನಿಕ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ, 13 ‘ವೀರಾಗ್ರಣಿʼ ಯರನ್ನು ಭೇಟಿ ಮಾಡಿ, ಅವರ ಆಶೀರ್ವಾದ ಪಡೆದಿದ್ದರು.

ಗಿಡ ನೆಟ್ಟ ನಂತರ ‘ಎಕ್ಸ್’‌ನಲ್ಲಿ (ಹಿಂದೆ ಟ್ವಿಟರ್) ಪೋಸ್ಟ್ ಮಾಡಿದ ಪ್ರಧಾನಿ ಮೋದಿ, “1971ರ ಯುದ್ಧದಲ್ಲಿ ಅದ್ಭುತ ಧೈರ್ಯ ಮತ್ತು ಶೌರ್ಯವನ್ನು ಪ್ರದರ್ಶಿಸಿದ ಕುಚ್‌ನ ಧೈರ್ಯಶಾಲಿ ತಾಯಂದಿರು ಮತ್ತು ಸಹೋದರಿಯರು ಇತ್ತೀಚೆಗೆ ನಾನು ಗುಜರಾತ್‌ಗೆ ಭೇಟಿ ನೀಡಿದಾಗ ಸಿಂದೂರ ಗಿಡವನ್ನು ಉಡುಗೊರೆಯಾಗಿ ನೀಡಿದ್ದರು. ಇಂದು ವಿಶ್ವ ಪರಿಸರ ದಿನದಂದು, ಆ ಸಸಿಯನ್ನು ದೆಹಲಿಯ ಪ್ರಧಾನಮಂತ್ರಿ ನಿವಾಸದಲ್ಲಿ ನೆಡುವ ಸವಲತ್ತು ನನಗೆ ದೊರಕಿದೆ. ಈ ಸಸ್ಯವು ನಮ್ಮ ದೇಶದ ನಾರಿಶಕ್ತಿಯ ಶೌರ್ಯ ಮತ್ತು ಸ್ಫೂರ್ತಿಗೆ ಒಂದು ಪ್ರಬಲ ಸಂಕೇತವಾಗಿ ಉಳಿಯುತ್ತದೆ” ಎಂದು ಬರೆದುಕೊಂಡಿದ್ದಾರೆ.

ಕುಚ್‌ನಲ್ಲಿ ‘ಸಿಂದೂರ ಸ್ಮಾರಕ ಉದ್ಯಾನವನ’ ನಿರ್ಮಾಣ

ಇದೇ ವೇಳೆ, ಪಾಕಿಸ್ತಾನದ ಗಡಿಗೆ ಹೊಂದಿಕೊಂಡಿರುವ ಗುಜರಾತ್‌ನ ಕುಚ್ ಜಿಲ್ಲೆಯ ಭುಜ್ ನಗರದ ಬಳಿ ‘ಸಿಂದೂರ ವನ’ (ಸಿಂದೂರ ಅರಣ್ಯ) ಎಂಬ ಸ್ಮಾರಕ ಉದ್ಯಾನವನವನ್ನು ನಿರ್ಮಿಸಲಾಗುತ್ತಿದೆ. ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಭಾರತದ ಮಿಲಿಟರಿ ಪ್ರತಿಕ್ರಿಯೆಯಾದ “ಆಪರೇಷನ್ ಸಿಂದೂರ” ಕ್ಕೆ ಸಮರ್ಪಿತವಾದ ಈ ಉದ್ಯಾನವನವು ಎಂಟು ಹೆಕ್ಟೇರ್ ಪ್ರದೇಶದಲ್ಲಿ ಹರಡಿಕೊಂಡಿದೆ.

ಕುಚ್ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಸಂದೀಪ್ ಕುಮಾರ್ ಪ್ರಕಾರ, ಈ ಉದ್ಯಾನವನದಲ್ಲಿ ಭಾರತೀಯ ಸೇನೆ, ನೌಕಾಪಡೆ, ವಾಯುಪಡೆ ಮತ್ತು ಗಡಿ ಭದ್ರತಾ ಪಡೆ (BSF) ಗಳಿಗೆ ಮೀಸಲಾದ ವಿವಿಧ ವಿಭಾಗಗಳಿರಲಿವೆ. ಮಿರ್ಜಾಪುರ್ ಗ್ರಾಮದಲ್ಲಿ ಗುರುತಿಸಲಾಗಿರುವ ಈ ಸ್ಥಳದಲ್ಲಿಯೇ ಮೇ 26ರಂದು ಪ್ರಧಾನಿ ನರೇಂದ್ರ ಮೋದಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ್ದರು. ಸುಮಾರು 40 ರಿಂದ 45 ಜಾತಿಗಳ 80,000 ಸಸ್ಯಗಳು, ಗಿಡಮೂಲಿಕೆಗಳು ಮತ್ತು ಪೊದೆಗಳನ್ನು ಇಲ್ಲಿ ಬೆಳೆಸಲಾಗುವುದು. ಈ ಉದ್ಯಾನವನವು ಸಶಸ್ತ್ರ ಪಡೆಗಳ ಶೌರ್ಯ ಮತ್ತು ಧೈರ್ಯವನ್ನು ಪ್ರತಿಬಿಂಬಿಸಲಿದೆ ಎಂದು ಕುಮಾರ್ ತಿಳಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read