ಮೈಸೂರು: ಇಂದು ನಾಡಿನೆಲ್ಲೆಡೆ ಆಯುಧ ಪೂಜೆ ಸಂಭ್ರಮ ಸಡಗರ ಮನೆ ಮಾಡಿದೆ. ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವದ ಬೆನ್ನಲ್ಲೇ ಮೈಸೂರು ಅರಮನೆಯಲ್ಲಿ ಆಯುಧ ಪೂಜೆ ಮತ್ತಷ್ಟು ಸಂಭ್ರಮ ಕಳೆಕಟ್ಟಿದೆ.
ಅರಮೆಯಲ್ಲಿ ರಾಜವಂಶಸ್ಥ ಯಧುವೀರ್ ಒಡೆಯರ್ ಅವರು ರಾಜ ಸಂಪ್ರದಾಯದಂತೆ ಆಯುಧಗಳಿಗೆ ಪೂಜೆ ನೆರವೇರಿಸಿದರು. ಬೆಳಿಗ್ಗೆ 6 ಗಂಟೆಯಿಂದ ಚಂಡಿಕಾ ಹೋಮ ಆರಂಭವಾಗಿದ್ದು ಬಳಿಕ ಅರಮನೆಯಿಂದ ಕೋಡಿ ಸೋಮೇಶ್ವರ ದೇವಾಲಯಕ್ಕೆ ಪಲ್ಲಕ್ಕಿಯಲ್ಲಿ ಆಯುಧಗಳನ್ನು ಕೊಂಡೊಯ್ಯಲಾಯಿತು.
ಆಯುಧಗಳನ್ನು ಶುಚಿಗೊಳಿಸಿ ವಾಪಸ್ ಅರಮನೆಗೆ ತರಲಾಯಿತು. ಅರಮನೆಯ ಆನೆಬಾಗಿಲು ಮೂಲಕ ಕಲ್ಯಾಣಮಂಟಪಕ್ಕೆ ಕೊಂಡೊಯ್ದು ಆಯುಧಗಳನ್ನು ಸೋಡಿಸಲಾಗಿದ್ದು, ಪೂಜೆಗೆ ಸಿದ್ಧಪಡಿಸಲಾಯಿತು. ಬಳಿಕ ರಾಜವಂಶಸ್ಥ ಯದುವೀರ್ ಒಡೆಯರ್ ಸಿಂಹಾಸನಕ್ಕೆ ಜೋಡಿಸಿದ್ದ ಸಿಂಹಕ್ಕೆ ಪೂಜೆ ಸಲ್ಲಿಸಿದರು. ಬಳಿಕ ರಾಜಪುರೋಹಿತರ ಮಾರ್ಗದರ್ಶನದಂತೆ ಆಯುಧಪೂಜೆ ನೆರವೇರಿಸಿದರು. ಕರಿಕಲ್ಲು ತೊಟ್ಟಿಯಲ್ಲಿ ಪಟ್ಟದ ಆನೆ, ಪಟ್ಟದ ಕುದುರೆ, ಪಟ್ಟದ ಒಂಟೆ, ಪಟ್ಟದ ಹಸು ಹಾಗೂ ಅರಮನೆಯಲ್ಲಿರುವ್ ಐಷಾರಾಮಿ ಕಾರುಗಳು, ಇಅತರೆ ವಾಹನಗಳಿಗೂ ಪೂಜೆ ಸಲ್ಲಿಸಲಾಯಿತು. ಆಯುಧಪೂಜೆ, ಧಾರ್ಮಿಕ ಕೈಂಕರ್ಯಕ್ಕೆ ರಾಣಿ ತ್ರಿಷಿಕಾ ಕುಮಾರಿ ಹಾಗೂ ಪುತ್ರ ಹಾಗೂ ರಾಜಮಾತೆ ಪ್ರಮೋದಾದೇವಿ ಸಾಕ್ಷಿಯಾದರು.
ಸಂಜೆ ಅರಮನೆಯಲ್ಲಿ ಖಾಸಗಿ ದರ್ಬಾರ್ ನಡೆಯಲಿದ್ದು, ಬೆಳ್ಳಿ ಬಾಗಿಲು ಮೂಲಕ ಯದುವೀರ್ ಒಡೆಯರ್ ಪ್ರವೇಶಿಸಲಿದ್ದಾರೆ. ಸಿಂಹಾಸನದ ಏಳು ಮೆಟ್ಟಿಲುಗಳನ್ನು ಏರಿ ಸಿಂಹಾಸನದಲ್ಲಿ ಆಸೀನರಾಗಿ ದರ್ಬಾರ್ ನಡೆಸಲಿದ್ದಾರೆ.