ಲಖ್ನೌ: ರಾಜಾ ರಘುವಂಶಿ ಹತ್ಯೆ ಮಾದರಿಯಲ್ಲಿಯೇ ಮತ್ತೊಂದು ಹತ್ಯೆ ಪ್ರಕರಣ ಬೆಳಕಿಗೆ ಬಂದಿದೆ. ಮಹಿಳೆಯೊಬ್ಬಳು ತನ್ನ ಪ್ರಿಯಕರನ ಜೊತೆ ಸೇರಿ ಪತಿಯನ್ನೇ ಹತ್ಯೆಗೈದು ನದಿಗೆ ಎಸೆದಿರುವ ಘಟನೆ ಉತ್ತರ ಪ್ರದೇಶದ ಬಲರಾಂ ಪುರದಲ್ಲಿ ನಡೆದಿದೆ.
ಪ್ರೀತಿಸಿ ವಿವಾಹವಾಗಿದ್ದ ಗಂಡನನ್ನೇ ಹತ್ಯೆಗೈದು, ಶವವನ್ನು ರಫ್ತಿ ನದಿಗೆ ಬಿಸಾಕಿದ್ದಾಳೆ. ಬಳಿಕ ಪತಿ ನಾಪತ್ತೆಯಾಗಿದ್ದಾನೆ ಎಂದು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ.
ಕಣ್ಣನ್ ಕೊಲೆಯಾಗಿರುವ ವ್ಯಕ್ತಿ. ಸಂಗೀತಾ ಪತಿಯನ್ನೇ ಹತ್ಯೆಗೈದ ಪತ್ನಿ. ಈ ಜೋಡಿ 18 ವರ್ಷಗಳ ಹಿಂದೆ ವಿವಾಹವಾಗಿದೆ. ಈ ನಡುವೆ ಪತಿ ಕಣ್ಣನ್ ಜೊತೆ ದೆಹಲಿಗೆ ಹೋಗುವಾಗ ಸಂಗೀತಾಳಿಗೆ ಅನಿಲ್ ಶುಕ್ಲಾ ಎಂಬಾತನ ಪರಿಚಯವಾಗಿದೆ. ಇಬ್ಬರ ಪರಿಚಯ ಮೊಬೈಲ್ ನಂಬರ್ ಬದಲಾಯಿಸಿಕೊಂಡು, ಸ್ನೇಹಕ್ಕೆ ತಿರುಗಿದೆ. ಹೀಗೆ ಆರಂಭವಾದ ಮಾತುಕತೆ ಪ್ರೀತಿ ಅರಳಲು ಕಾರಣವಾಗಿದೆ. ಆಗಾಗ ಸಂಗೀತಾಳ ಗ್ರಾಮಕ್ಕೂ ಅನಿಲ್ ಶುಕ್ಲಾ ಬಂದು ಹೋಗಲಾರಂಭಿಸಿದ್ದ. ಅನಿಲ್ ತನ್ನ ಚಿಕ್ಕಮ್ಮನ ಮಗ ಎಂದು ಸಂಗೀತಾ ಮನೆಯಲ್ಲಿ ಸುಳ್ಳು ಹೇಳಿದ್ದಳು. ಜೂನ್ ೫ರಂದು ಪತಿ ಕಣ್ಣನ್ ಏಕಾಎಕಿ ನಾಪತ್ತೆಯಾಗಿದ್ದಾರೆ ಎಂದು ಸಂಗೀತಾ ಧೇಬರುವ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ.
ತನಿಖೆ ಆರಂಭಿಸಿದ ಪೊಲೀಸರಿಗೆ ಎರಡು ತಿಂಗಳ ಹಿಂದೆ ಪತಿ-ಪತ್ನಿ ಇಬ್ಬರೂ ಗ್ರಾಮವನ್ನು ಬಿಟ್ಟು ಹೋಗಿದ್ದಾರೆ ಎಂದು ಕಣ್ಣನ್ ಸಹೋದರ ಬಾಅಬುಲಾಲ್ ತಿಳಿಸಿದ್ದಾರೆ. ಇದರಿಂದ ಮತ್ತಷ್ಟು ಅನುಮಾನಗೊಂಡ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಸಂಗೀತಳನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಸಂಗೀತಾ ತನ್ನ ಪ್ರಿಯಕರನೊಂದಿಗೆ ಸೇರಿ ಪತಿಗೆ ವಿಷಕುಡಿಸಿ ಹತ್ಯೆಗೈದು ಬಳಿಕ ಶವವನ್ನು ರಾಫ್ತಿ ನದಿಗೆ ಎಸೆದು ಹೋಗಿದ್ದಾಗಿ ಬಾಯ್ಬಿಟ್ಟಿದ್ದಾಳೆ.
ಸಂಗೀತಾ ಹಾಗೂ ಆಕೆಯ ಪ್ರಿಯಕರ ಅನಿಲ್ ಶುಕ್ಲಾನನ್ನು ಪೊಲೀಸರು ಬಂಧಿಸಿದ್ದಾರೆ.