ಹಾವೇರಿ: ಸರ್ಕಾರಿ ಅಧಿಕಾರಿಗೆ ಲಂಚ ನೀಡಲು ವ್ಯಕ್ತಿಯೋರ್ವರು ಪತ್ನಿಯ ಮಾಂಗಲ್ಯವನ್ನೇ ಅಡವಿಟ್ಟು ಹಣ ತಂದಿರುವ ಘಟನೆ ಹಾವೇರಿಯಲ್ಲಿ ನಡೆದಿದೆ.
ಹಾವೇರಿಯ ಬೆಳವಗಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಮಹಾಂತೇಶ್ ಬಡಿಗೇರ್ ಎಂಬುವವರು ತಮ್ಮ ಪತ್ನಿಯ ಮಾಂಗಲ್ಯ ಸರವನ್ನು ಅಡವಿಟ್ಟು ಸರ್ಕಾರಿ ಅಧಿಕಾರಿಗೆ ಲಂಚದ ಹಣ ನೀಡಿದ್ದಾರೆ. ಆದಾಗ್ಯೂ ಅವರ ಬಿಲ್ ಮಂಜೂರು ಮಾಡಿಲ್ಲ.
ವಸತಿ ಯೋಜನೆಯಡಿ ಬಿಲ್ ಮಂಜೂರು ಮಾಡಲು ಅಧಿಕಾರಿ ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ. ಬಿಲ್ ಅಗತ್ಯವಿರುವ ಕಾರಣಕ್ಕೆ ಅಧಿಕಾರಿಯ ಲಂಚದ ಹಣ ಪಾವತಿಸುವುದು ಅನಿವಾರ್ಯವಾಗಿತ್ತು ಎಂದು ಮಹಾಂತೇಶ್ ನೋವು ತೋಡಿಕೊಂಡಿದ್ದಾರೆ.
ನೆರೆಯಿಂದಾಗಿ ಮನೆ ಕುಸಿದು ಹೋಗಿತ್ತು. ಹಾಗಾಗಿ ಸಾಲ ಮಾಡಿ ಮನೆಕಟ್ಟಿದ್ದರಿಂದ ತನಗೆ ಬಿಲ್ ಅನಿವಾರ್ಯವಾಗಿತ್ತು. ಬಿಲ್ ಮಂಜೂರು ಮಾಡಲು ಅಧಿಕಾರಿ ಹಣಕ್ಕೆ ಬೇಡಿಕೆ ಇಟ್ಟಿದ್ದು, ಬೇರೆ ದಾರಿ ಕಾಣದೇ ಪತ್ನಿಯ ಮಾಂಗಲ್ಯ ಸರ ಅಡವಿಟ್ಟು ಹಣ ತಂದು ಅಧಿಕಾರಿ ಮದನ್ ಮೋಹನ್ ಎಂಬುವವರಿಗೆ 20 ಸಾವಿರ ರೂಪಾಯಿ ಲಂಚ ಕೊಟ್ಟಿದ್ದೇನೆ. ಆದಾಗ್ಯೂ ಈವರೆಗೂ ಬಿಲ್ ಮಂಜೂರು ಮಾಡಿಕೊಟ್ಟಿಲ್ಲ ಎಂದು ತಹಶೀಲ್ದಾರ್ ಶರಣಮ್ಮ ಅವರಿಗೆ ದೂರು ನೀಡಿದಾರೆ.
ಸಂತ್ರಸ್ತ ವ್ಯಕ್ತಿಯ ನೋವು ಆಲಿಸಿದ ತಹಶೀಲ್ದಾರ್, ಹಣ ನೀಡಿದ ದಾಖಲೆ ನೀಡಿ, ಈ ಬಗ್ಗೆ ಸೂಕ್ತ ತನಿಖೆ ನಡೆಸಿ, ಸರ್ಕಾರಿ ಅಧಿಕಾರಿಯ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.