ಬೆಂಗಳೂರು : ಮೆಕ್ಕೆಜೋಳ ಬೆಳೆಗಾರರ ಅಹವಾಲುಗಳು, ದಿಢೀರ್ ಬೆಲೆ ಇಳಿಕೆ ಹಾಗೂ ಖರೀದಿ ಕೇಂದ್ರ ತೆರೆಯುವ ಸಂಬಂಧ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸಭೆ ನಡೆಸಿದರು. ಎಥೆನಾಲ್ ಉತ್ಪಾದನೆಗಾಗಿ ಮೆಕ್ಕೆ ಜೋಳವನ್ನು ತಕ್ಷಣ ಖರೀದಿಸುವಂತೆ ರಾಜ್ಯದ ಪ್ರಮುಖ ಡಿಸ್ಟಿಲರಿಗಳೊಂದಿಗೆ ಸಭೆ ನಡೆಸಿ, ಸೂಚನೆ ನೀಡಲಾಗುವುದು. ಕುಕ್ಕುಟೋದ್ಯಮಕ್ಕೆ ಮೆಕ್ಕೆಜೋಳದ ಬೇಡಿಕೆಯಿದ್ದು, ಅವರೊಂದಿಗೆ ಸಹ ಮಾತುಕತೆ ನಡೆಸಲಾಗುವುದು ಎಂದರು.
ಸಭೆಯಲ್ಲಿ ಪ್ರಸ್ತಾಪವಾದ ಪ್ರಮುಖ ವಿಷಯಗಳು
- ಒಂದು ಕಡೆ ರಾಜ್ಯದಲ್ಲಿ ಮತ್ತು ದೇಶದಲ್ಲಿ ಮೆಕ್ಕೆಜೋಳ ಉತ್ಪಾದನೆ ಹೆಚ್ಚಳವಾಗಿದೆ. ಈ ಬಗ್ಗೆ ಮಾಹಿತಿ ಇದ್ದೂ ಕೂಡ ಕೇಂದ್ರ ಸರ್ಕಾರ ವಿದೇಶಗಳಿಂದ 70 ಲಕ್ಷ ಮೆಟ್ರಿಕ್ ಟನ್ ಮೆಕ್ಕೆಜೋಳವನ್ನು ಆಮದು ಮಾಡಿಕೊಂಡಿದೆ. ಇದರಿಂದಾಗಿ ರಾಜ್ಯದ ಮತ್ತು ದೇಶದ ಮೆಕ್ಕೆಜೋಳ ಬೆಳೆದ ರೈತರಿಗೆ ವಿಪರೀತ ಹೊರೆ ಆಗಿದೆ.
- ಮೆಕ್ಕೆಜೋಳದಿಂದ ಎಥೆನಾಲ್ ಉತ್ಪಾದಿಸಲು ಕೇಂದ್ರ ಸರ್ಕಾರ ರಾಜ್ಯಕ್ಕೆ ನಿಗದಿ ಮಾಡಿರುವ ಕೋಟಾ ಪ್ರಮಾಣವೂ ಅತ್ಯಂತ ಕಡಿಮೆ ಇದೆ. ಇದರಿಂದಾಗಿ ಡಿಸ್ಟಿಲರಿಗಳು ಮೆಕ್ಕೆಜೋಳ ಖರೀದಿಸುವ ಪ್ರಮಾಣವೂ ಕಡಿಮೆ ಆಗಿದೆ.
- ನಿಯಮ ಪಾಲಿಸದ ಏಜೆನ್ಸಿಗಳಿಂದ ಸಮಸ್ಯೆ: ಕೇಂದ್ರದ ನೋಡಲ್ ಏಜೆನ್ಸಿಗಳಾದ ನಾಫೆಡ್/ಎನ್ಸಿಸಿಎಫ್ ಮೂಲಕ ಬೆಂಬಲ ಬೆಲೆ ಯೋಜನೆಯಡಿ ಮೆಕ್ಕೆ ಜೋಳ ಸಂಗ್ರಹಣೆ ಮತ್ತು ಎಥೆನಾಲ್ ಉತ್ಪಾದನೆಗೆ ಬಳಕೆಗಾಗಿ ಈಗಾಗಲೇ ಕೇಂದ್ರ ಸರ್ಕಾರದ ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಆದರೆ ಸಂಬಂಧಪಟ್ಟ ನೋಡಲ್ ಏಜೆನ್ಸಿಗಳು ಮಾರ್ಗಸೂಚಿಯಂತೆ ಇನ್ನೂ ಖರೀದಿ ಪ್ರಕ್ರಿಯೆಯನ್ನೇ ಆರಂಭಿಸಿಲ್ಲ. ಇದು ಸಮಸ್ಯೆ ಬಿಗಡಾಯಿಸಲು ಮುಖ್ಯ ಕಾರಣ.
- ಡಿಸ್ಟಿಲರಿಗಳು ಮೆಕ್ಕೆಜೋಳ ಬೆಲೆ ಕಡಿಮೆ ಇದ್ದಾಗಲೇ ಹಿಂದೆಯೇ ಖರೀದಿಸಿ ಶೇಖರಣೆ ಮಾಡಿಕೊಂಡಿವೆ. ಇದರಿಂದಾಗಿ ಈಗ ಖರೀದಿಗೆ ಮುಂದೆ ಬರುತ್ತಿಲ್ಲ. ಇದು ಸ್ಪಷ್ಟ ನಿಯಮ ಉಲ್ಲಂಘನೆಯಾಗಿದ್ದು ಡಿಸ್ಟಿಲರಿಗಳು ನಿಯಮಾನುಸಾರ ಮೆಕ್ಕೆ ಖರೀದಿಗೆ ಮುಂದೆ ಬರಬೇಕಿದೆ.
ರಾಜ್ಯ ಸರ್ಕಾರ ತೆಗೆದುಕೊಳ್ಳಬಹುದಾದ ಕ್ರಮಗಳ ಬಗ್ಗೆ ಸಲಹೆಗಳು: - ಮೆಕ್ಕೆ ಜೋಳ ಆಮದು ಮೇಲೆ ಕೇಂದ್ರ ಸರ್ಕಾರ ತಕ್ಷಣ ನಿಯಂತ್ರಣ ಹೇರುವ ಮೂಲಕ ಬೆಲೆಯಲ್ಲಿ ಸ್ಥಿರತೆ ಸಾಧಿಸಲು ಸಾಧ್ಯವಿದೆ. ಈ ಬಗ್ಗೆ ಕೇಂದ್ರ ಸರ್ಕಾರವನ್ನು ಒತ್ತಾಯಿಸುವುದು.
- ಸದ್ಯಕ್ಕೆ 8ಲಕ್ಷ ಟನ್ ಮೆಕ್ಕೆಜೋಳವನ್ನು ತಕ್ಷಣ ಖರೀದಿಸಲು ಸದರಿ ಏಜೆನ್ಸಿಗಳು ಕ್ರಮ ಕೈಗೊಳ್ಳಲು ಒತ್ತಾಯಿಸುವುದು.
- ಖರೀದಿ ಕೇಂದ್ರಗಳನ್ನು ನಾಫೆಡ್/ಎನ್ಸಿಸಿಎಫ್ ಇನ್ನೂ ಆರಂಭಿಸದಿರುವುದರಿಂದ ತೊಂದರೆಯಾಗಿದ್ದು, ಮಾರುಕಟ್ಟೆಯಲ್ಲಿ ಧಾರಣೆಯನ್ನು ಸ್ಥಿರಗೊಳಿಸಲು ತಕ್ಷಣ ಖರೀದಿ ಪ್ರಾರಂಭಿಸುವಂತೆ ಒತ್ತಾಯಿಸುವುದು.
ಮುಖ್ಯಮಂತ್ರಿಗಳು ನೀಡಿದ ಸೂಚನೆಗಳು: - ಬೆಲೆ ಕುಸಿತದಿಂದ ಸಂಕಷ್ಜ ಎದುರಿಸುತ್ತಿರುವ ರಾಜ್ಯದ ಮೆಕ್ಕೆಜೋಳ ರೈತರ ನೆರವಿಗೆ ಸರ್ಕಾರ ಎಲ್ಲಾ ರೀತಿಯ ನೆರವು ಒದಗಿಸಲಿದೆ.
- 70ಲಕ್ಷ ಮೆ. ಟನ್ ಮೆಕ್ಕೆ ಜೋಳವನ್ನು ಆಮದು ಮಾಡಿಕೊಳ್ಳಲಾಗಿದೆ. ನಮ್ಮ ದೇಶದಲ್ಲಿಯೇ ಉತ್ಪಾದನೆ ಹೆಚ್ಚಾಗಿರುವುದರಿಂದ ಆಮದು ಮೇಲೆ ನಿರ್ಬಂಧ ವಿಧಿಸಲು ಒತ್ತಾಯಿಸಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯುತ್ತೇವೆ.
- ಎಥೆನಾಲ್ ಉತ್ಪಾದನೆಗಾಗಿ ಮೆಕ್ಕೆ ಜೋಳವನ್ನು ತಕ್ಷಣ ಖರೀದಿಸುವಂತೆ ರಾಜ್ಯದ ಪ್ರಮುಖ ಡಿಸ್ಟಿಲರಿಗಳೊಂದಿಗೆ ಸಭೆ ನಡೆಸಿ, ಸೂಚನೆ ನೀಡಲಾಗುವುದು.
- ಕುಕ್ಕುಟೋದ್ಯಮಕ್ಕೆ ಮೆಕ್ಕೆಜೋಳದ ಬೇಡಿಕೆಯಿದ್ದು, ಅವರೊಂದಿಗೆ ಸಹ ಮಾತುಕತೆ ನಡೆಸಲಾಗುವುದು.
