ಪಣಜಿ: ಗೋವಾದಲ್ಲಿ ಕನ್ನಡಿಗರ ಮೇಲಿನ ಹಲ್ಲೆ, ದೌರ್ಜನ್ಯ ಪ್ರಕರಣಗಳು ಮುಂದುವರೆದಿದೆ. ವಿಜಯಪುರ ಮೂಲದ ಲಾರಿ ಚಾಲಕನೊಬ್ಬನ್ನು ಹಿಡಿದು ಗೀವಾದಲ್ಲಿ ದುಷ್ಕರ್ಮಿಗಳು ಥಳಿಸಿರುವ ಘಟನೆ ನಡೆದಿದೆ.
ಗೋವಾದ ಪ್ರೆಡ್ನೆ ಬಳಿ ರಸ್ತೆಯಲ್ಲಿ ಈ ಘಟನೆ ನಡೆದಿದೆ. ದೂರು ನೀಡಿದರೂ ಪೊಲೀಸರು ಕ್ರಮ ಕೈಗೊಂಡಿಲ್ಲ ಎಂದು ಲಾರಿ ಚಾಲಕ ನೋವು ತೋಡಿಕೊಂಡಿದಾರೆ. ವಿಜಯಪುರ ಜಿಲ್ಲೆಯ ಕಲಗೇರಿ ಗ್ರಾಮದ ನಿವಾಸಿ ಅನಿಲ್ ರಾಥೋಡ್ ಹಲ್ಲೆಗೊಳಗಾದ ವ್ಯಕ್ತಿ.
ಮಹಾರಾಷ್ಟ್ರದಿಂದ ಗೋವಾಕ್ಕೆ ಅನಿಲ್ ಕಲ್ಲು ಸಾಗಿಸುತ್ತಿದ್ದರು. ಈ ವೇಳೆ ಗೋವಾದ ಪ್ರೆಡ್ನೆ ಬಳಿ ಕಾರು, ಜೀಪ್ ಗಳಲ್ಲಿ ಬಂದ ದುಷ್ಕರ್ಮಿಗಳ ಗ್ಯಾಂಗ್ ಲಾರಿ ಅಡ್ಡಗಟ್ಟಿ ಚಾಲಕನನ್ನು ನಿಂದಿಸಿ ಹಲ್ಲೆ ನಡೆಸಿದ್ದಾರೆ. ಹಲ್ಲೆ ನಡೆಸುತ್ತಿರುವುದನ್ನು ಅನಿಲ್ ರಾಥೋಡ್ ತಮ್ಮ ಮೊಬೈಲ್ ನಲ್ಲಿ ಸೆರೆಹಿಡಿದಿದ್ದಾರೆ. ಬಳಿಕ ಪ್ರೆಡ್ನೆ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದರೂ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ ಎಂದು ಆರೋಪಿಸಿದ್ದಾರೆ.
ಗೋವಾದಲ್ಲಿ ಕನ್ನಡಿಗರ ಮೇಲೆ ನಿರಂತರ ಹಲ್ಲೆ ನಡೆಯುತ್ತಿದೆ. ಇದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಗಂಭೀರವಾಗಿ ಪರಿಗಣಿಸಿ ಗೋವಾ ಸಿಎಂ ಜೊತೆ ಮಾತುಕತೆ ನಡೆಸಿ ಕನ್ನಡಿಗರನ್ನು ರಕ್ಷಿಸಿ ಎಂದು ಅನಿಲ್ ರಾಥೋಡ್ ಮನವಿ ಮಾಡಿದ್ದಾರೆ.