ಮಂಗಳೂರು: ಧರ್ಮಸ್ಥಳದ ವಿವಿಧೆಡೆ ಹೆಣಗಳನ್ನು ಹೂತಿಟ್ಟಿರುವುದಾಗಿ ಹೇಳಿದ್ದ ಚಿನ್ನಯ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ ಐಟಿ ತನಿಖೆ ಮುಂದುವರೆಸಿದೆ. ಈ ನಡುವೆ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ.
ಎಸ್ ಐಟಿ ಅಧಿಕಾರಿಗಳು ಬಂಗ್ಲಗುಡ್ಡ ರಹಸ್ಯ ಬಯಲು ಮಾಡಲು ಮುಂದಾಗಿದ್ದಾರೆ. ಬುರುಡೆ ರಹಸ್ಯದ ಬೆನ್ನು ಬಿದ್ದ ಎಸ್ ಐಟಿಗೆ ಸೌಜನ್ಯಾ ಮಾವ ವಿಠಲಗೌಡನೇ ಬುರುಡೆ ತಂದುಕೊಟ್ಟಿದ್ದು, ಆತ ಬಂಗ್ಲಗುಡ್ಡದಿಂದ ತಂದಿದ್ದಾಗಿ ಚಿನ್ನಯ್ಯ ಹಾಗೂ ಗಿರೀಶ್ ಮಟ್ಟಣ್ಣವರ್ ಹೇಳಿಕೆ ನೀಡಿದ್ದರು. ವಿಠಲಗೌಡನನ್ನು ವಿಚಾರಿಸಿದಾಗ ಆತ ತಾನೇ ತಂದುಕೊಟ್ಟಿದ್ದಾಗಿ ಹೇಳಿದ್ದಾನೆ ಎನ್ನಲಾಗಿದೆ. ಈ ನಡುವೆ ಎಸ್ ಐಟಿ ಅಧಿಕಾರಿಗಳು ವಿಠಲಗೌಡನನ್ನು ಬಂಗ್ಲಗುಡ್ದಕ್ಕೆ ಕರೆದೊಯ್ದು ಸ್ಥಳ ಮಹಜರು ನಡೆಸಿದ್ದಾರೆ.
ಈ ಬೆಳವಣಿಗೆ ನಡುವೆಯೇ ವಿಠಲಗೌಡನ ವಿಡಿಯೋವೊಂದು ವೈರಲ್ ಆಗಿದ್ದು, ಬಂಗ್ಲಗುಡ್ಡದಲ್ಲಿ ತಾನು ಹೆಣಗಳ ರಾಶಿ ನೋಡಿದ್ದೇನೆ. ಮೊದಲ ಬಾರಿ ಸ್ಥಳ ಮಹಜರಿಗೆ ಹೋದಾಗ ಮೂರು ಅಸ್ಥಿಪಂಜರವನ್ನು ನೋಡಿದ್ದೇನೆ. ಎರಡನೇ ಬಾರಿ ಹೋದಾಗ ಬಂಗ್ಲಗುಡ್ಡದಲ್ಲಿ ಮರದ ಕೆಳಭಾಗದಲ್ಲಿ ಹೆಣಗಳ ರಾಶಿ ಕಂಡಿದ್ದೇನೆ. ನನ್ನ ಕಣ್ಣಿಗೆ ಐದು ಅಸ್ಥಿಪಂಜರಗಳು ಕಂಡಿವೆ. ಅದರ ಬಳಿಯೇ ವಾಮಾಚಾರಕ್ಕೆ ಬಳಸುವ ಕೆಲ ವಸ್ತುಗಳು ಕೂಡ ಇದ್ದವು ಎಂದು ಸ್ಫೋಟಕ ಹೇಳಿಕೆ ನೀಡಿದ್ದಾನೆ.
ಒಟ್ಟಾರೆ ಧರ್ಮಸ್ಥಳ ಬುರುಡೆ ಪ್ರಕರಣಕ್ಕೆ ದಿನಕ್ಕೊಂದು ಟ್ವಿಸ್ಟ್ ಸಿಗುತ್ತಿದ್ದು, ಎಸ್ ಐಟಿ ಅಧಿಕಾರಿಗಳು ಬಂಗ್ಲಗುಡ್ಡದಲ್ಲಿ ಮತ್ತೆ ಶೋಧಕಾರ್ಯ ಮುಂದುವರೆಸಿದ್ದಾರೆ.