ನವದೆಹಲಿ: ನಿರ್ಮಾಪಕರು, ನಿರ್ದೇಶಕರು ಎಂದು ಹೇಳಿಕೊಂಡು ಹಲವರನ್ನು ವಂಚಿಸಿದ್ದ ಮಹಿಳೆ ಸೇರಿ ಇಬ್ಬರನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.
ಆರೋಪಿಗಳು ‘ಬಂಟಿ ಔರ್ ಬಬ್ಲಿ’ ಬಾಲಿವುಡ್ ಚಿತ್ರದಿಂದ ಪ್ರೇರಿತರಾಗಿ ಕೃತ್ಯವೆಸಗಿದ್ದಾರೆ. ಲಖ್ನೋ ನಿವಾಸಿ ತರುಣ್ ಶೇಖರ್ ಶರ್ಮಾ(32), ದೆಹಲಿ ನಿವಾಸಿ ಆಶಾ ಸಿಂಗ್(29) ಬಂಧಿತ ಆರೋಪಿಗಳು. ಇವರ ವಿರುದ್ಧ ದೇಶಾದ್ಯಂತ 20ಕ್ಕೂ ಹೆಚ್ಚು ದೂರು ದಾಖಲಾಗಿವೆ.
ಇವರು ಟಿವಿ ಧಾರಾವಾಹಿಗಳಲ್ಲಿ, ಒಟಿಟಿ ವೇದಿಕೆ, ಶೋಗಳಲ್ಲಿ ಪಾತ್ರ ನೀಡುವುದಾಗಿ ಜಾಲತಾಣಗಳ ಮೂಲಕ ಅಭಿನಯ ಆಕಾಂಕ್ಷಿಗಳನ್ನು ಆಕರ್ಷಿಸುತ್ತಿದ್ದರು. ಇತ್ತೀಚಿನ ಪ್ರಕರಣವೊಂದರಲ್ಲಿ ದೂರುದಾರನಿಂದ 24 ಲಕ್ಷ ರೂ. ಪಡೆದು ವಂಚಿಸಿದ್ದರು ಎನ್ನಲಾಗಿದ್ದು, ತರುಣ್ ತರುಣ್ ಶೇಖರ್ ಶರ್ಮಾ ಮತ್ತು ಆಶಾ ಸಿಂಗ್ ಅವರನ್ನು ಬಂಧಿಸಲಾಗಿದೆ.
ನೈಋತ್ಯ ದೆಹಲಿ ಪೊಲೀಸರ ಸೈಬರ್ ಘಟಕವು ಇಬ್ಬರು ಆರೋಪಿಗಳನ್ನು ಬಹು-ರಾಜ್ಯ ಕಾರ್ಯಾಚರಣೆಯ ನಂತರ ಬೆಂಗಳೂರಿನ ಬಾಡಿಗೆ ಸರ್ವಿಸ್ ಅಪಾರ್ಟ್ಮೆಂಟ್ನಿಂದ ಬಂಧಿಸಲಾಗಿದೆ.
ಬಾಲಿವುಡ್ ಚಿತ್ರ ಬಂಟಿ ಔರ್ ಬಬ್ಲಿಯಿಂದ ಪ್ರೇರಿತರಾದ ಈ ಜೋಡಿ, ಸ್ಟಾರ್ ಪ್ಲಸ್ / ಹಾಟ್ಸ್ಟಾರ್ ಧಾರಾವಾಹಿಯಲ್ಲಿ ಮಗಳಿಗೆ ಪಾತ್ರ ನೀಡುವ ಭರವಸೆ ನೀಡಿ ದೆಹಲಿ ಮಹಿಳೆಯೊಬ್ಬರಿಗೆ ಸುಮಾರು 24 ಲಕ್ಷ ರೂಪಾಯಿ ವಂಚಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ವಂಚನೆ ಪ್ರಕರಣದಲ್ಲಿ ಇಬ್ಬರೂ ಬೇಕಾಗಿದ್ದಾರೆ. ಉತ್ತರ ಪ್ರದೇಶ ಮತ್ತು ದೆಹಲಿಯಲ್ಲಿ ಕನಿಷ್ಠ ಐದು ಇತರ ಪ್ರಕರಣಗಳೊಂದಿಗೆ ಸಂಬಂಧ ಹೊಂದಿದ್ದಾರೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ. ದೇಶಾದ್ಯಂತ ರಾಷ್ಟ್ರೀಯ ಸೈಬರ್ ಅಪರಾಧ ವರದಿ ಪೋರ್ಟಲ್ (NCRP) ನಲ್ಲಿ ಅವರ ವಿರುದ್ಧ 20 ಕ್ಕೂ ಹೆಚ್ಚು ದೂರುಗಳನ್ನು ಪತ್ತೆಹಚ್ಚಲಾಗಿದೆ.