BIG NEWS: ಎಲ್ಲಿ ಮನಸ್ಸಿದೆಯೋ ಅಲ್ಲಿ ಮಾರ್ಗ: ಉತ್ತಮವಾಗಿ ಓದಿ ರಾಜನಾಗುತ್ತೀರೋ, ಇಲ್ಲ ಸೇವಕರಾಗುತ್ತೀರೋ ಆಯ್ಕೆ ನಿಮ್ಮದು: ವಿದ್ಯಾರ್ಥಿಗಳಿಗೆ ಡಿಸಿಎಂ ಕಿವಿಮಾತು

ಬೆಂಗಳೂರು: ಮನಸ್ಸಿದ್ದಲ್ಲಿ ಮಾರ್ಗವಿದೆ. ಚೆನ್ನಾಗಿ ಓದಿದರೆ ಎಲ್ಲಾ ರಂಗದಲ್ಲೂ ರಾಜನಾಗಿ ರೂಪುಗೊಳ್ಳಬಹುದು. ಇಲ್ಲವಾದರೆ ಸೇವಕನಾಗಿ ಇರಬೇಕಾಗುತ್ತದೆ. ಏನಾಗಬೇಕು ಎಂಬುದು ಆಯ್ಕೆ ವಿದ್ಯಾರ್ಥಿಗಳದ್ದು ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಕಿವಿಮಾತು ಹೇಳಿದ್ದಾರೆ.

ಬೆಂಗಳೂರಿನ ಆಡುಗೋಡಿಯ ಅಯ್ಯಪ್ಪ ಗಾರ್ಡನ್ ನ ಪಟೇಲ್ ಮುನಿಚಿನ್ನಪ್ಪ ಪ್ರೌಢಶಾಲೆಯಲ್ಲಿ ನಡೆದ “ಶಾಲಾ ಪ್ರಾರಂಭೋತ್ಸವ 2025-26” ಕಾರ್ಯಕ್ರಮದಲ್ಲಿ ಮಾತನಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್, ಎಲ್ಲಿ ಶ್ರಮ ಇದೆಯೋ ಅಲ್ಲಿ ಫಲವಿದೆ. ಎಲ್ಲಿ ಮನಸ್ಸಿದೆಯೋ ಅಲ್ಲಿ ಮಾರ್ಗವಿದೆ. ಚೆನ್ನಾಗಿ ಓದಿ ರಾಜನಾಗುತ್ತೀರೋ, ಇಲ್ಲ ಸೇವಕನಾಗುತ್ತಿರೋ ಆಯ್ಕೆ ನಿಮ್ಮದು ಎಂದರು.

ಇಷ್ಟು ದಿನ ಮಕ್ಕಳು ರಜೆಯಲ್ಲಿ ನಲಿದಾಡಿದ್ದೀರಿ. ಈಗ ನಲಿಯುವುದರ ಜತೆಗೆ ಕಲಿಯಿರಿ ಎಂದು ಶಾಲೆಗಳಿಗೆ ನಿಮ್ಮನ್ನು ಸ್ವಾಗತಿಸುತ್ತಿದ್ದೇವೆ. ಸರ್ಕಾರಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಮಕ್ಕಳ ಪೋಷಕರಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ. ಕಳೆದ ವರ್ಷ ಬಾಗಲಕೋಟೆ ಮೊರಾರ್ಜಿ ದೇಸಾಯಿ ಶಾಲೆಯ ವಿದ್ಯಾರ್ಥಿನಿ ಅಂಕಿತಾ ರಾಜ್ಯಕ್ಕೆ ಮೊದಲ ಸ್ಥಾನ ಪಡೆದಿದ್ದರು. ಈ ವರ್ಷ ಬೆಳಗಾವಿಯ ಬೈಲಹೊಂಗಲದ ದೇವಲಾಪುರ ಸರ್ಕಾರಿ ಶಾಲೆಯ ವಿದ್ಯಾರ್ಥಿನಿ ರೂಪಾ ಪಾಟೀಲ್ ಅವರು ಅಗ್ರಸ್ಥಾನ ಪಡೆದಿದ್ದಾರೆ. 10ನೇ ತರಗತಿ ಪರೀಕ್ಷೆಯಲ್ಲಿ 625 ಅಂಕಗಳನ್ನು ಗಳಿಸಿದ ವಿದ್ಯಾರ್ಥಿಗಳ ಪೋಷಕರು ಹಾಗೂ ಶಿಕ್ಷಕರಿಗೆ ಸರ್ಕಾರ ಅಭಿನಂದಿಸುತ್ತಿದೆ ಎಂದರು.

ಬೀಜ ಬಿತ್ತಿದರೆ ಉತ್ತಮ ಬೆಳೆ ಬೆಳೆಯುತ್ತದೆ. ಜ್ಞಾನವನ್ನು ಬಿತ್ತಿದರೆ ಉತ್ತಮ ಪ್ರಜೆಗಳಾಗುತ್ತಾರೆ. ನೀವೆಲ್ಲರೂ ನಮ್ಮ ಆಸ್ತಿ ಎಂದು ನಮ್ಮ ಸರ್ಕಾರ ಹೆಚ್ಚಿನ ಸಹಕಾರ ನೀಡಲು ನಮ್ಮ ಸರ್ಕಾರ ಬದ್ಧವಾಗಿದೆ. ಸರ್ಕಾರಿ ಶಾಲೆ ಮಕ್ಕಳಿಗೆ ಖಾಸಗಿ ಶಾಲೆಗಳಿಗಿಂತ ಉತ್ತಮ ಗುಣಮಟ್ಟದ ಶಿಕ್ಷಣ ಸಿಗಬೇಕು ಎಂದು ಶಿಕ್ಷಕರು ಪ್ರಯತ್ನಿಸುತ್ತಿದ್ದಾರೆ. ಶಿಕ್ಷಣದ ಬೇರು ಕಹಿಯಾಗಿದ್ದರೂ ಫಲ ಸಿಕ್ಕಾಗ ಬಹಳ ಸಿಹಿಯಾಗಿರುತ್ತದೆ. ಬೇಸಿಗೆ ರಜೆ ಮುಗಿಸಿರುವ ನೀವು ಈಗ ಶಾಲೆಗೆ ಬಂದು ಕಲಿತು ಉತ್ತಮ ಪ್ರಜೆಯಾಗಬೇಕು ಎಂದು ಹೇಳಿದರು.

ಜೀವನದಲ್ಲಿ ಯಶಸ್ಸು ಸಾಧಿಸಲು ಕನಸು ಕಾಣಬೇಕು, ಕನಸು ಈಡೇರಿಸಿಕೊಳ್ಳಲು ಬಯಸಬೇಕು. ಕನಸಿಗಾಗಿ ಬದ್ಧತೆ ಹೊಂದಿರಬೇಕು, ಅದಕ್ಕಾಗಿ ಶಿಸ್ತು ಹೊಂದಿರಬೇಕು. ನಿಮ್ಮ ಕನಸು ಗಗನದೆತ್ತರಕ್ಕೆ ಇರಬೇಕು. ಉದ್ಯೋಗ ಪಡೆಯುವುದಷ್ಟೇ ನಿಮ್ಮ ಕನಸಾಗಬಾರದು. ಬೇರೆಯವರಿಗೆ ಉದ್ಯೋಗ ಸೃಷ್ಟಿಸುವ ಮಟ್ಟಕ್ಕೆ ನೀವು ಬೆಳೆಯುವುದು ನಿಮ್ಮ ಕನಸಾಗಬೇಕು. ಈ ದೇಶದಲ್ಲಿ ಅತಿ ಹೆಚ್ಚು ಇಂಜಿನಿಯರ್ ಗಳು, ವೈದ್ಯರು, ಮಾನವ ಸಂಪನ್ಮೂಲ ತಯಾರಾಗುತ್ತಿರುವುದು ಕರ್ನಾಟಕ ರಾಜ್ಯದಲ್ಲಿ. ವಿಶ್ವದ ಎಲ್ಲಾ ದೇಶಗಳಿಂದ ಬೆಂಗಳೂರಿಗೆ ಬಂದು ವ್ಯಾಸಂಗ ಮಾಡುತ್ತಿದ್ದಾರೆ. ಐಟಿ ಬಿಟಿ, ಸಂಶೋಧನೆ ಸೇರಿದಂತೆ ಪ್ರಮುಖ ಕ್ಷೇತ್ರಗಳು ಬೆಂಗಳೂರು ಯಶಸ್ಸು ಸಾಧಿಸಿದೆ. ಕೃಷ್ಣರಾಜ ಒಡೆಯರ್ ಅವರ ಕಾಲದಿಂದ ವಿವಿಧ ಸರ್ಕಾರಗಳು ಇಲ್ಲಿ ಶೈಕ್ಷಣಿಕವಾಗಿ ಅಡಿಪಾಯ ಹಾಕಿದ ಪರಿಣಾಮ ನಮ್ಮ ರಾಜ್ಯ ಹಾಗೂ ಬೆಂಗಳೂರು ಈ ಸಾಧನೆ ಮಾಡಿದೆ ಎಂದು ತಿಳಿಸಿದರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read