ಬೆಂಗಳೂರು: ಸ್ಯಾಂಡಲ್ ವುಡ್ ನಿರ್ಮಾಪಕ ಸೂರಪ್ಪ ಬಾಬು ವಿರುದ್ಧ ವಂಚನೆ ಆರೋಪ ಕೇಳಿ ಬಂದಿದೆ. ಬೆಂಗಳೂರಿನ ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ.
ಮಹಿಳೆಯೊಬ್ಬರು ನೀಡಿದ ದೂರು ಆಧರಿಸಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. 2023ರಲ್ಲಿ ಮಹಿಳೆಗೆ ಪರಿಚಯವಾಗಿದ್ದ ನಿರ್ಮಾಪಕ ಸೂರಪ್ಪ ಬಾಬು ಅವರು ಶಿವರಾಜ್ ಕುಮಾರ್ ಮತ್ತು ಗಣೇಶ್ ಜೊತೆಗೆ ಸಿನಿಮಾ ಮಾಡುತ್ತಿದ್ದೇನೆ ಎಂದು ಹೇಳಿದ್ದರಲ್ಲದೆ, ಚಿತ್ರ ನಿರ್ಮಾಣಕ್ಕೆ ಸಾಲ ಬೇಕೆಂದು ಕೇಳಿದ್ದರು. ಹೀಗಾಗಿ ಹಂತ ಹಂತವಾಗಿ ಮಹಿಳೆ 92 ಲಕ್ಷ ರೂಪಾಯಿ ನೀಡಿದ್ದರು.
ಆದರೆ, ಕೆಲವು ದಿನಗಳ ಕಾಲ ಸೂರಪ್ಪ ಬಾಬು ಸಂಪರ್ಕಕ್ಕೆ ಸಿಗಲಿಲ್ಲ. ವಿಚಾರಿಸಿದಾಗ ಅವರು ಸಿನಿಮಾ ಮಾಡುತ್ತಿಲ್ಲವೆಂದು ಗೊತ್ತಾಗಿದೆ. ನಂತರ ಹಣ ಕೇಳಿದಾಗ 25 ಲಕ್ಷ ರೂ. ನೀಡಿದ್ದಾರೆ. ಆದರೆ, ಉಳಿದ ಹಣ ಕೇಳಿದಾಗ ಮಹಿಳೆಗೆ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ.
ಹೀಗಾಗಿ ನಿರ್ಮಾಪಕ ಸೂರಪ್ಪ ಬಾಬು ವಿರುದ್ಧ ಮಹಿಳೆ ದೂರು ನೀಡಿದ್ದಾರೆ. ಸದ್ಯ ಮಹಿಳೆಯ ದೂರು ಆಧರಿಸಿ ಎಫ್ಐಆರ್ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.