ಬೆಂಗಳೂರು: ಅತ್ಯಾಚಾರ ಪ್ರಕರಣದಲ್ಲಿ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರಿಗೆ ಜೈಲು ಶಿಕ್ಷೆಯಾಗಿದೆ. ಈ ಹಿನ್ನೆಲೆಯಲ್ಲಿ ತೀರ್ಪು ಪ್ರಶ್ನಿಸಿ ಪ್ರಜ್ವಲ್ ರೇವಣ್ಣ ಹೈಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿದ್ದಾರೆ.
ಮೇಲ್ಮನವಿ ಸಲ್ಲಿಕೆಯಾದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ವಿಭಾಗೀಯ ಪೀಠದಿಂದ ನೋಟಿಸ್ ಜಾರಿ ಮಾಡಲಾಗಿದೆ. ಸಮಗ್ರ ಸಾರಾಂಶ ಸಲ್ಲಿಸಲು ಪ್ರಜ್ವಲ್ ರೇವಣ್ಣ ಪರ ವಕೀಲರಿಗೆ ನ್ಯಾಯಾಲಯ ಸೂಚನೆ ನೀಡಿದೆ. ಎಸ್.ಪಿ.ಪಿ. ನೇಮಕದ ನೇಮಕದ ಬಗ್ಗೆಯೂ ಸರ್ಕಾರಕ್ಕೆ ತಿಳಿಸಲಾಗಿದೆ.
ನ್ಯಾಯಮೂರ್ತಿ ಕೆ.ಎಸ್. ಮುದುಗಲ್, ನ್ಯಾಯಮೂರ್ತಿ ಟಿ. ವೆಂಕಟೇಶ ನಾಯಕ್ ಅವರಿದ್ದ ಪೀಠ ಸೂಚನೆ ನೀಡಿದೆ. ರಾಜಕೀಯ ದುರುದ್ದೇಶದಿಂದ ಮಹಿಳೆಯನ್ನು ಅಸ್ತ್ರವಾಗಿಸಿ ಎಫ್ಐಆರ್ ದಾಖಲಿಸಲಾಗಿದೆ. 2023ರಲ್ಲಿ ಫಾರ್ಮ್ ಹೌಸ್ ಗೃಹಪ್ರವೇಶದಲ್ಲಿ ಮಹಿಳೆ ಪಾಲ್ಗೊಂಡಿದ್ದಾರೆ. ಅತ್ಯಾಚಾರವಾಗಿದ್ದರೆ ಗೃಹಪ್ರವೇಶಕ್ಕೆ ಹೇಗೆ ಬರುತ್ತಿದ್ದರು? ಈ ಮಹಿಳೆಯಿಂದ ಮೂರು ವರ್ಷದ ಬಳಿಕ ಪೊಲೀಸರು ದೂರು ಪಡೆದಿದ್ದಾರೆ. ಕೂದಲನ್ನು ಸುತ್ತಿ ಬ್ಯಾಗ್ ನಲ್ಲಿ ಇಟ್ಟ ರಹಸ್ಯ ತಿಳಿಯುತ್ತಿಲ್ಲ. ಮಹಿಳೆಯ ಸಿಆರ್ಪಿಸಿ 164 ಹೇಳಿಕೆಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿಲ್ಲ. ವಿಡಿಯೋ ಇದೆ ಎಂದು ಆರೋಪಿಸಲಾದ ಮೊಬೈಲ್ ಅನ್ನು ವಶಕ್ಕೆ ಪಡೆದಿಲ್ಲ. ಅನೇಕ ವಿರೋಧಾಭಾಸಗಳಿವೆ ಎಂದು ಅರ್ಜಿ ಸಲ್ಲಿಸಿದ್ದು ಜೈಲು ಶಿಕ್ಷೆ ರದ್ದುಪಡಿಸುವಂತೆ ಹೈಕೋರ್ಟ್ ಗೆ ಪ್ರಜ್ವಲ್ ರೇವಣ್ಣ ಮನವಿ ಮಾಡಿದ್ದಾರೆ.