BREAKING: ಕ್ರೀಡಾಂಗಣಕ್ಕೆ ದಿಢೀರ್ ಭೇಟಿ ವೇಳೆ ಅವ್ಯವಸ್ಥೆ ಕಂಡು ಸಚಿವ ಮಧು ಬಂಗಾರಪ್ಪ ಗರಂ: ಅಧಿಕಾರಿಗಳಿಗೆ ತೀವ್ರ ತರಾಟೆ

ಶಿವಮೊಗ್ಗ: ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರು ನಗರದ ನೆಹರು ಕ್ರೀಡಾಂಗಣಕ್ಕೆ  ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕ್ರೀಡಾಂಗಣದ ಅವ್ಯವಸ್ಥೆಯ ಬಗ್ಗೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ತರಬೇತಿ ಪಡೆಯುತ್ತಿರುವ ಕ್ರೀಡಾಪಟುಗಳು ಹಾಗೂ ಸಾರ್ವಜನಿಕರು ಕ್ರೀಡಾಂಗಣದ ಸಮಸ್ಯೆಗಳ ಬಗ್ಗೆ, ಅಧಿಕಾರಿಗಳ ನಿರ್ಲಕ್ಷದ ಬಗ್ಗೆ ಸಚಿವರಿಗೆ ತಿಳಿಸಿದ್ದು, ಮಾಹಿತಿ ಪಡೆದ ಸಚಿವರು ತಕ್ಷಣ ಸಮಸ್ಯೆಗಳ ಪರಿಹಾರಕ್ಕೆ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ.

ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಆಯುಕ್ತರನ್ನು ಹಾಗೂ ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರನ್ನು ಸ್ಥಳಕ್ಕೆ ತಕ್ಷಣ ಬರುವಂತೆ ತಿಳಿಸಿ ಕ್ರೀಡಾಪಟುಗಳಿಗೆ ಯಾವುದೇ ತೊಂದರೆ ಆಗದಂತೆ ತಕ್ಷಣ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ. ಕುಡಿಯುವ ನೀರಿನ ವ್ಯವಸ್ಥೆ, ಶೌಚಾಲಯ ಹಾಗೂ ಇನ್ನಿತರ ಮೂಲ ಸೌಕರ್ಯಗಳ ಬಗ್ಗೆ ತುರ್ತು ಕ್ರಮ ಕೈಗೊಳ್ಳುವಂತೆ ಆದೇಶಿಸಿದ್ದಾರೆ.

ಸ್ಮಾರ್ಟ್ ಸಿಟಿ ಯೋಜನೆಯಡಿ ನಿರ್ಮಾಣಗೊಂಡ ಕಟ್ಟಡ, ನೀರಿನ ಟ್ಯಾಂಕ್ ಹಾಗೂ ಇನ್ನಿತರ ಕಾಮಗಾರಿಗಳು ಕಳಪೆಯಾಗಿದ್ದು, ನೀರಿನ ಟ್ಯಾಂಕ್ ಸೋರುತ್ತಿದೆ ಎಂದು ಸಾರ್ವಜನಿಕರು ಸಚಿವರಲ್ಲಿ ದೂರಿದರು. ಇದರಿಂದ ಕುಪಿತಗೊಂಡ ಸಚಿವರು, 16 ನೇ ತಾರೀಖಿನಂದು ನಡೆಯಲಿರುವ ಮಹಾನಗರ ಪಾಲಿಕೆಯ ಸಭೆಗೆ ಸಂಪೂರ್ಣ ಮಾಹಿತಿಯೊಂದಿಗೆ ಹಾಗೂ ಕಳಪೆ ಕಾಮಗಾರಿಯ ಪಟ್ಟಿಯೊಂದಿಗೆ ಸಭೆಗೆ ಬರಬೇಕೆಂದು ಅಧಿಕಾರಿಗಳಿಗೆ ಆದೇಶಿಸಿದರು.

ಈ ನಡುವೆ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ.  ಕೇಳಿದರೆ ಅಧಿಕಾರಿಗಳು ಉಡಾಫೆ ಉತ್ತರ ನೀಡುತ್ತಾರೆ. ಇಂದು ನೀವು ಭೇಟಿ ನೀಡುತ್ತಿದ್ದೀರಿ ಎಂದು ತಿಳಿದು ನೀರಿನ ವ್ಯವಸ್ಥೆ ಮಾಡಿದ್ದಾರೆ ಎಂದು ಸಚಿವರ ಗಮನ ಸೆಳೆದಾಗ ಆಕ್ರೋಶಗೂಂಡ ಸಚಿವರು ಅಧಿಕಾರಿಗಳಿಗೆ ತರಾಟೆ ತೆಗೆದುಕೊಂಡು ಕ್ರೀಡಾಪಟುಗಳಿಗೆ ಹಾಗೂ ಸಾರ್ವಜನಿಕರಿಗೆ ಯಾವುದೇ ತೊಂದರೆ ಆಗದಿರುವ ಹಾಗೆ ಕಾರ್ಯನಿರ್ವಹಿಸಬೇಕು. ಒಂದೆರಡು ದಿನಗಳಲ್ಲಿ ಸಮಸ್ಯೆಗಳು  ಬಗೆಹರಿಯದೆ ಇದ್ದಲ್ಲಿ ನಿಮ್ಮ ಮೇಲೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದ್ದಾರೆ.

ಫುಟ್ಬಾಲ್ ಆಟಗಾರರಿಗೆ ಅನುಕೂಲವಾಗುವಂತೆ ಗ್ರೀನ್ ಲಾನ್ ಅಳವಡಿಸುವಂತೆ ಸೂಚಿಸಿ ಇನ್ನಿತರ ಅಭಿವೃದ್ಧಿ ಕಾಮಗಾರಿಗಳಿಗೆ ಪಟ್ಟಿ ತಯಾರಿಸಿ ನಾಳಿನ ಸಭೆಯಲ್ಲಿ ಮಂಡಿಸುವಂತೆ ತಿಳಿಸಿದ್ದಾರೆ. ಈ ನಡುವೆ ಫುಟ್ಬಾಲ್ ಆಟಗಾರರು ತಮಗೆ ಟೂರ್ನಮೆಂಟ್ ಗೆ ತೆರಳಲು ಅಗತ್ಯವಿರುವ ಜರ್ಕಿನ್ ಶೂ ಹಾಗೂ ಶಾರ್ಟ್ಸ್ ಗಳನ್ನು ಒದಗಿಸುವಂತೆ ಮನವಿ ಸಲ್ಲಿಸಿದಾಗ ಪೂರಕವಾಗಿ ಸ್ಪಂದಿಸಿದ  ಸಚಿವರು ನನ್ನ ವೈಯಕ್ತಿಕ ಹಣದಿಂದ ತಮಗೆ ವ್ಯವಸ್ಥೆ ಮಾಡುವುದಾಗಿ  ಭರವಸೆ ನೀಡಿದರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read