ಬೆಂಗಳೂರು: ಪರಿಶಿಷ್ಟ ಜಾತಿಗಳಿಗೆ ಒಳ ಮೀಸಲಾತಿ ಕಲ್ಪಿಸುವುದಕ್ಕೆ ಸಂಬಂಧಿಸಿದಂತೆ ರಚಿಸಲಾಗಿರುವ ನಿವೃತ್ತ ನ್ಯಾಯಮೂರ್ತಿ ಹೆಚ್.ಎನ್. ನಾಗಮೋಹನದಾಸ್ ಅಧ್ಯಕ್ಷತೆಯ ಏಕಸದಸ್ಯ ವಿಚಾರಣಾ ಆಯೋಗದ ಅವಧಿಯನ್ನು ಜುಲೈ 31ರವರೆಗೆ ರಾಜ್ಯ ಸರ್ಕಾರ ವಿಸ್ತರಿಸಿದೆ.
ನಾಗಮೋಹನದಾಸ್ ಅಧ್ಯಕ್ಷತೆಯ ಏಕಸದಸ್ಯ ವಿಚಾರಣಾ ಆಯೋಗದ ಅವಧಿ ಮೇ 31ರ ಶನಿವಾರ ಮುಕ್ತಾಯವಾಗಬೇಕಿತ್ತು. ಪರಿಶಿಷ್ಟ ಜಾತಿಗಳಿಗೆ ಒಳಮಿಸಲಾತಿ ಕಲ್ಪಿಸಲು ಆಯೋಗ ಕೈಗೊಂಡಿರುವ ಸಮಗ್ರ ಸಮೀಕ್ಷೆ ಜೂನ್ 1ರವರೆಗೂ ನಡೆಯಲಿದೆ. ಸಮೀಕ್ಷೆಯ ದತ್ತಾಂಶಗಳನ್ನು ಪರಿಶೀಲಿಸಿ ಕೊರತೆಗಳನ್ನು ಸರಿಪಡಿಸಿ ಅಂತಿಮ ಶಿಫಾರಸು ಮಾಡಲು ಇನ್ನು ಎರಡು ತಿಂಗಳು ಕಾಲಾವಕಾಶ ಬೇಕಿದೆ ಎಂದು ಆಯೋಗದ ಅಧ್ಯಕ್ಷರು ಕೋರಿದ್ದ ಹಿನ್ನೆಲೆಯಲ್ಲಿ ಆಯೋಗದ ಅವಧಿಯನ್ನು ಜುಲೈ 31ರವರೆಗೆ ಎರಡು ತಿಂಗಳ ಕಾಲ ವಿಸ್ತರಿಸಲಾಗಿದೆ ಎಂದು ಸಮಾಜ ಕಲ್ಯಾಣ ಇಲಾಖೆ ತಿಳಿಸಿದೆ.