ಶಿವಮೊಗ್ಗ ಜಿಲ್ಲೆಯಲ್ಲಿ 70ರ ದಶಕದಲ್ಲೇ ರನ್ ವೇಯಲ್ಲಿ ವಿಮಾನ ಇಳಿಯುತ್ತಿದ್ದವು…!

ಶಿವಮೊಗ್ಗ: ಶಿವಮೊಗ್ಗ ಸಮೀಪದ ಸೋಗಾನೆಯಲ್ಲಿ ಸುಸಜ್ಜಿತ ವಿಮಾನ ನಿಲ್ದಾಣ ನಿರ್ಮಿಸಲಾಗಿದ್ದು, ಫೆಬ್ರವರಿ 27 ರಂದು ಪ್ರಧಾನಿ ನರೇಂದ್ರ ಮೋದಿ ಉದ್ಘಾಟನೆ ನೆರವೇರಿಸಲಿದ್ದಾರೆ.

70ರ ದಶಕದಲ್ಲೇ ಶಿವಮೊಗ್ಗ ಜಿಲ್ಲೆಯಲ್ಲಿ ವಿಮಾನಗಳು ಇಳಿಯುತ್ತಿದ್ದವು. ರನ್ ವೇ ಕೂಡ ಇತ್ತು. ವಿಐಎಸ್ಎಲ್ ಕಾರ್ಖಾನೆಗೆ ಬಂದು ಹೋಗಲು ಭದ್ರಾವತಿ ಸಮೀಪ ರನ್ ವೇ ನಿರ್ಮಿಸಲಾಗಿತ್ತು. ಸೈಲ್ ಅಧಿಕಾರಿಗಳು ಮತ್ತು ಬೇರೆ ದೇಶದ ಇಂಜಿನಿಯರ್ಗಳು ವಿಐಎಸ್ಎಲ್ ಕಾರ್ಖಾನೆಗೆ ಭೇಟಿ ನೀಡಲು ವಿಮಾನಗಳನ್ನು ಬಳಸುತ್ತಿದ್ದರು.

ಭದ್ರಾವತಿಯ ಬೊಮ್ಮನಕಟ್ಟೆ ಸಮೀಪದ ಸರ್ ಎಂ .ವಿಶ್ವೇಶ್ವರಯ್ಯ ಸರ್ಕಾರಿ ವಿಜ್ಞಾನ ಪದವಿ ಕಾಲೇಜಿನ ಹಿಂಭಾಗದ ಹೊಸ ನಂಜಾಪುರ ಗ್ರಾಮದಲ್ಲಿ ವಿಐಎಸ್ಎಲ್ ಕಾರ್ಖಾನೆಗೆ ಸೇರಿದ ರನ್ ವೇ ನಿರ್ಮಿಸಲಾಗಿತ್ತು. ಇದೀಗ ಅದು ಮಕ್ಕಳು ಕ್ರಿಕೆಟ್ ಆಡುವ ಜಾಗವಾಗಿದೆ. ಅಲ್ಲಿ ಸಣ್ಣ ಕೆರೆ ನಿರ್ಮಾಣವಾಗಿದೆ.

ಒಂದು ಕಿಲೋಮೀಟರ್ ಉದ್ದದ ರನ್ ವೇ ಇದ್ದು, ಸಮತಟ್ಟಾದ ಜಾಗದಲ್ಲಿ ಸಣ್ಣ ವಿಮಾನಗಳು ಇಳಿಯುತ್ತಿದ್ದವು. ಟಾರ್ ಹಾಕಿರಲಿಲ್ಲ. ಆದರೆ ಗಟ್ಟಿ ಮುಟ್ಟಾದ ನೆಲ ಇದಾಗಿದ್ದು, ಸಣ್ಣ ವಿಮಾನಗಳು ಲ್ಯಾಂಡ್ ಆಗುತ್ತಿದ್ದವು. 70ರ ದಶಕದಲ್ಲಿ ಸಣ್ಣ ವಿಮಾನಗಳು ಭದ್ರಾವತಿಯ ಬಾನಂಗಳದಲ್ಲಿ ಹಾರಾಟ ನಡೆಸಿದ್ದವು. ಇಲ್ಲಿನ ಜನ ಕೌತುಕದಿಂದ ನೋಡುತ್ತಿದ್ದರು.

ವಿಮಾನಗಳು ಇಳಿಯಲು ರನ್ ವೇ ಮಾತ್ರ ನಿರ್ಮಿಸಲಾಗಿತ್ತು ಇದರ ಹೊರತಾಗಿ ನಿಲ್ದಾಣವೆಂದು ಯಾವುದೇ ಕಟ್ಟಡಗಳನ್ನು ನಿರ್ಮಿಸಿರಲಿಲ್ಲ. ಈಗ ಈ ಸ್ಥಳದಲ್ಲಿ ವಿಐಎಸ್ಎಲ್ ಕಾರ್ಖಾನೆಯ ಸೂಚನಾ ಫಲಕ ಇದೆ. ಅಂದ ಹಾಗೆ ಅನಂತಕುಮಾರ್ ಕೇಂದ್ರ ಸಚಿವರಾಗಿದ್ದ ಸಂದರ್ಭದಲ್ಲಿ ಭದ್ರಾವತಿಯ ಈ ರನ್ ವೇ ಬಳಸಿಕೊಂಡು ವಿಮಾನ ನಿಲ್ದಾಣ ನಿರ್ಮಿಸುವ ಬಗ್ಗೆ ಪ್ರಸ್ತಾಪಿಸಿದ್ದರು. ಆದರೆ, ಅದು ಕಾರ್ಯಗತವಾಗಲಿಲ್ಲ. ಈಗ ಸೋಗಾನೆ ಬಳಿ ಸುಸಜ್ಜಿತ ಅಭಿಮಾನ ನಿಲ್ದಾಣ ನಿರ್ಮಾಣವಾಗಿದ್ದು, ನಾಳೆ ಪ್ರಧಾನಿಯವರಿಂದ ಉದ್ಘಾಟನೆಗೊಳ್ಳಲಿದೆ. 70 ದಶಕದಲ್ಲೇ ಜಿಲ್ಲೆಯಲ್ಲಿ ವಿಮಾನ ನಿಲ್ದಾಣದ ಕೀರ್ತಿ ತಂದಿದ್ದ ಭದ್ರಾವತಿ ವಿಐಎಸ್ಎಲ್ ಈಗ ಬಂದ್ ಆಗಲಿದ್ದು, ಕಾರ್ಖಾನೆಯನ್ನು ಮುಂದುವರೆಸಬೇಕೆಂದು ಹೋರಾಟ ನಡೆದಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read