ಸೆಲ್ಪಿ ತೆಗೆದುಕೊಳ್ಳಲು ಹೋಗಿ ಕೊಡಗು ಜಿಲ್ಲೆಯ ಹಾರಂಗಿ ಜಲಾಶಯದಲ್ಲಿ ನಾಪತ್ತೆಯಾಗಿದ್ದ ಪ್ರವಾಸಿಗ ಸಂದೀಪ್ ಮೃತದೇಹ ಪತ್ತೆಯಾಗಿದೆ.
ಹೌದು, ಕೊಡಗು ಜಿಲ್ಲೆಯ ಹಾರಂಗಿ ಜಲಾಶಯದ ಬಳಿ ಮತ್ತೊಂದು ಅವಘಡ ನಡೆದಿದ್ದು, ಗುರುವಾರ ಸಂಜೆ ಸೆಲ್ಫಿ ತೆಗೆದುಕೊಳ್ಳಲು ಹೋದ ಬೆಂಗಳೂರಿನ ವಿದ್ಯಾರಣ್ಯಪುರಂ ನಿವಾಸಿ 46 ವರ್ಷದ ಸಂದೀಪ ಕಾಲು ಜಾರಿ ನೀರಿಗೆ ಬಿದ್ದು ನಾಪತ್ತೆಯಾಗಿದ್ದರು. ಇದೀಗ ಅಗ್ನಿಶಾಮಕದ ದಳದ ಸಿಬ್ಬಂದಿಗಳು ಸಂದೀಪ್ ಮೃತದೇಹವನ್ನು ಪತ್ತೆಮಾಡಿ ಹೊರಕ್ಕೆ ತಂದಿದ್ದಾರೆ. ಜಲಾಶಯದ ಕೆಳಭಾಗದ ಸೇತುವೆ ಮೇಲೆ ಸೆಲ್ಫಿ ತೆಗೆದುಕೊಳ್ಳುತ್ತಿದ್ದ ವೇಳೆ ನೀರಿಗೆ ಬಿದ್ದು ಸಂದೀಪ್ ನಾಪತ್ತೆಯಾಗಿದ್ದರು. ಅಗ್ನಿಶಾಮಕ ತುರ್ತು ಸೇವೆಗಳ ಇಲಾಖೆ ಸಿಬ್ಬಂದಿ ಇವರಿಗಾಗಿ ಹುಡುಕಾಟ ನಡೆಸಿದ್ದರು.
ಇತ್ತೀಚೆಗಷ್ಟೇ ಕೊಲ್ಲೂರಿನ ಅರಿಶಿನಗುಂಡಿ ಫಾಲ್ಸ್ ನಲ್ಲಿ ಭದ್ರಾವತಿ ಮೂಲದ ಶರತ್ ಬಿದ್ದು ಸಾವನ್ನಪ್ಪಿದ್ದರು. ಈ ಬೆನ್ನಲ್ಲೇ ಮತ್ತೊಂದು ಘಟನೆ ನಡೆದಿದೆ.