
ಐಸಿಸಿ ಪುರುಷರ ವಿಶ್ವಕಪ್ ಟೂರ್ನಿಯ ಭಾಗವಾಗಿ ಅಹಮದಾಬಾದ್ನಲ್ಲಿ ನಡೆಯಲಿರುವ ಭಾರತ ಮತ್ತು ಪಾಕಿಸ್ತಾನ ನಡುವಿನ ಏಕದಿನ ಕ್ರಿಕೆಟ್ ಪಂದ್ಯಕ್ಕೆ ಮಹಾರಾಷ್ಟ್ರ ನವನಿರ್ಮಾಣ ಸೇನೆ (ಎಂಎನ್ಎಸ್) ನಾಯಕ ಸಂದೀಪ್ ದೇಶಪಾಂಡೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
“ನಮ್ಮ ಸೈನಿಕರ ಮೇಲೆ ದಾಳಿ ಮಾಡಿ ಕೊಂದವರು ಮತ್ತು ನಮ್ಮ ಅಧಿಕಾರಿಗಳಿಗೆ ಹನಿ ಟ್ರ್ಯಾಪ್ ಮಾಡುವ ಅಂತಹ ರಾಷ್ಟ್ರದೊಂದಿಗೆ ನಾವು ಆಡಬೇಕೇ?” ಎಂದು ಸಂದೀಪ್ ದೇಶಪಾಂಡೆ ಪ್ರಶ್ನಿಸಿದ್ದಾರೆ.
“ಎಲ್ಲಾ ಭಯೋತ್ಪಾದಕ ದಾಳಿಗಳ ಹಿಂದೆ ಪಾಕಿಸ್ತಾನವಿದೆ ಎಂಬುದನ್ನು ನೆನಪಿಡಿ. ಅಂತಹ ರಾಷ್ಟ್ರವನ್ನು ನಾವು ಸ್ವಾಗತಿಸಬೇಕೇ ? ಇದು ರಾಜಕೀಯದ ಬಗ್ಗೆ ಅಲ್ಲ, ಆದರೆ ರಾಷ್ಟ್ರದ ಬಗ್ಗೆ. ಇಂತಹ ಪಂದ್ಯಗಳು ನಡೆಯುವಾಗ ಪಾಕಿಸ್ತಾನಿ ನಾಗರಿಕರು ಸಹ ತಮ್ಮ ಧ್ವಜಗಳೊಂದಿಗೆ ಬರುತ್ತಾರೆ. ಇದನ್ನು ನಾವು ಸಹಿಸಬೇಕೇ ? ಈ ಬಗ್ಗೆ ದೇಶಾದ್ಯಂತ ಚರ್ಚೆ ನಡೆಯಬೇಕು,” ಎಂದು ಆಗ್ರಹಿಸಿದ್ದಾರೆ.
ಇದು ನನ್ನ ವೈಯಕ್ತಿಕ ಅನಿಸಿಕೆಯಾಗಿದ್ದು ಪಕ್ಷದ ನಿಲುವನ್ನು ಮುಖ್ಯಸ್ಥರಾದ ರಾಜ್ ಠಾಕ್ರೆ ಹಂಚಿಕೊಳ್ಳುತ್ತಾರೆ ಎಂದು ಸ್ಪಷ್ಟಪಡಿಸಿದ್ದಾರೆ.
ಕಳೆದ ವರ್ಷ ಡಿಸೆಂಬರ್ನಲ್ಲಿ ಮಹಾರಾಷ್ಟ್ರದಲ್ಲಿ ಬಿಡುಗಡೆಗೆ ಸಿದ್ಧವಾಗಿದ್ದ ಪಾಕಿಸ್ತಾನಿ ಚಲನಚಿತ್ರ “ದಿ ಲೆಜೆಂಡ್ ಆಫ್ ಮೌಲಾ ಜಾಟ್” ಅನ್ನು ಪ್ರದರ್ಶಿಸದಂತೆ ಚಿತ್ರಮಂದಿರದ ಮಾಲೀಕರಿಗೆ ಎಂಎನ್ಎಸ್ ಪಕ್ಷವು ಎಚ್ಚರಿಕೆ ನೀಡಿತ್ತು.