
ಉತ್ಸವದ ಹಿನ್ನೆಲೆಯಲ್ಲಿ ದೇವಸ್ಥಾನಕ್ಕೆ ಕೇಸರಿ ಬಣ್ಣದ ದೀಪಾಲಂಕಾರ ಮಾಡಿದ್ದು, ಅದನ್ನು ಬದಲಾಯಿಸುವಂತೆ ಪೊಲೀಸರು ಸೂಚಿಸಿದ ಬಳಿಕ ಕೇರಳದಲ್ಲಿ ವಿವಾದ ಭುಗಿಲೆದ್ದಿದೆ.
ತಿರುವನಂತಪುರಂನ ವೆಲ್ಲಯಣಿಯಲ್ಲಿರುವ ಭದ್ರಕಾಳಿ ದೇವಸ್ಥಾನದ ಉತ್ಸವಕ್ಕೆ ಹಾಕಲಾಗಿದ್ದ ಕೇಸರಿ ಬಣ್ಣದ ಅಲಂಕಾರಗಳನ್ನು ತೆಗೆದು, ಬದಲಾಗಿ ಬಹುವರ್ಣದ ಅಲಂಕಾರಗಳನ್ನು ಬಳಸುವಂತೆ ಕೇರಳ ಪೊಲೀಸರು ದೇವಸ್ಥಾನದ ಆಡಳಿತ ಮಂಡಳಿಗೆ ನಿರ್ದೇಶನ ನೀಡಿದ್ದರು.
ಇದು ಆಡಳಿತಾರೂಢ ಸಿಪಿಐ(ಎಂ) ಹಿಂದೂ ಆಚರಣೆಗಳು ಮತ್ತು ಪದ್ಧತಿಗಳನ್ನು ನಾಶಪಡಿಸುವ ಪ್ರಯತ್ನ ಎಂದು ದೇವಾಲಯದ ಆಡಳಿತ ಮಂಡಳಿ ಹೇಳಿದೆ. 70 ದಿನಗಳ ಕಾಲ ನಡೆಯುವ ಭದ್ರಕಾಳಿ ಉತ್ಸವವು ಫೆಬ್ರವರಿ 14 ರ ಮಂಗಳವಾರದಿಂದ ಪ್ರಾರಂಭವಾಗಿದೆ.
ಉತ್ಸವದ ಪೂರ್ವಭಾವಿಯಾಗಿ ದೇವಾಲಯದ ಸಮಿತಿಯು ಸಾಂಪ್ರದಾಯಿಕ ಕೇಸರಿ ಬಟ್ಟೆ, ಧ್ವಜಗಳು ಮತ್ತು ಬಂಟಿಂಗ್ಗಳನ್ನು ಬಳಸಿ ದೇಗುಲದ ಪ್ರದೇಶದನ್ನು ಅಲಂಕರಿಸಿತ್ತು. ಕೇಸರಿ ಬಣ್ಣದ ವಸ್ತುಗಳನ್ನು ಬಳಸಿ ತಾತ್ಕಾಲಿಕ ಶೆಡ್ ಕೂಡ ಮಾಡಿಕೊಂಡಿದ್ದರು. ಕಾನೂನು ಮತ್ತು ಸುವ್ಯವಸ್ಥೆಯ ಸಮಸ್ಯೆಗಳನ್ನು ಉಲ್ಲೇಖಿಸಿ ಕೇಸರಿ ಬದಲು ಎಲ್ಲಾ ಬಣ್ಣಗಳ ಅಲಂಕಾರಗಳನ್ನು ಬಳಸಲು ಸ್ಥಳೀಯ ಪೊಲೀಸರು ದೇವಾಲಯದ ಸಮಿತಿಯನ್ನು ಕೇಳಿಕೊಂಡಿದ್ದಾರೆ.
ದೇವಾಲಯದ ಅಧಿಕಾರಿಗಳು ಅಲಂಕಾರಗಳನ್ನು ಬದಲಾಯಿಸಲು ನಿರಾಕರಿಸಿದ ನಂತರ, ಸಹಾಯಕ ಪೊಲೀಸ್ ಆಯುಕ್ತರು ಸಭೆಯನ್ನು ಕರೆದು ಬಹುವರ್ಣಗಳನ್ನು ಬಳಸಲು ಸೂಚಿಸಿದರು. ಇದರ ಬೆನ್ನಲ್ಲೇ ಹೆಚ್ಚುವರಿ ಜಿಲ್ಲಾಧಿಕಾರಿಗಳು ಕೂಡ ವಿವಿಧ ಇಲಾಖೆಗಳ ಸಭೆ ಕರೆದು ದೇವಸ್ಥಾನದ ಉತ್ಸವ ನಡೆಸುವ ಕುರಿತು ಚರ್ಚೆ ನಡೆಸಿದ್ದು, ಅದರಲ್ಲಿ ಬಹುವರ್ಣದ ಅಲಂಕಾರಗಳನ್ನು ಬಳಸುವಂತೆ ಪೊಲೀಸರು ಮತ್ತೊಮ್ಮೆ ಕೋರಿದರು.
ಏತನ್ಮಧ್ಯೆ, ಬಲಪಂಥೀಯ ಸಂಘಟನೆ ಹಿಂದೂ ಐಕ್ಯವೇದಿ ಈ ವಿಷಯದಲ್ಲಿ ಮಧ್ಯಪ್ರವೇಶಿಸುವಂತೆ ಕೋರಿ ನ್ಯಾಯಾಲಯದ ಮೊರೆ ಹೋಗಿದೆ.