ಹೊಸ ವರ್ಷದಂದು ದೆಹಲಿಯಲ್ಲಿ 20 ವರ್ಷದ ಯುವತಿಯ ಭೀಕರ ಅಪಘಾತ ಪ್ರಕರಣದಲ್ಲಿ ಹೊಸ ಟ್ವಿಸ್ಟ್ ಸಿಕ್ಕಿದೆ. ಪೊಲೀಸರ ಪ್ರಕಾರ 20 ವರ್ಷದ ಯುವತಿ ಒಬ್ಬಂಟಿಯಾಗಿ ಸವಾರಿ ಮಾಡುತ್ತಿರಲಿಲ್ಲ. ಆಕೆಯ ಜೊತೆ ಸ್ಕೂಟಿಯಲ್ಲಿ ಮತ್ತೊಬ್ಬ ಗೆಳತಿಯೂ ಸಹ ಇದ್ದಳು. ಅಪಘಾತದ ವೇಳೆ ಮೃತಪಟ್ಟ ಯುವತಿಯ ಗೆಳತಿಗೂ ಗಾಯಗಳಾಗಿವೆ ಎಂದು ತಿಳಿದುಬಂದಿದೆ.
ಅಪಘಾತ ನಡೆದ ಮಾರ್ಗವನ್ನು ಪತ್ತೆ ಹಚ್ಚಿದಾಗ ಮೃತ ಯುವತಿ ತನ್ನ ಸ್ಕೂಟಿಯಲ್ಲಿ ಒಬ್ಬಳೇ ಇರಲಿಲ್ಲ ಎಂಬುದು ತಿಳಿದುಬಂದಿದೆ. ಅಪಘಾತದ ವೇಳೆ ಆಕೆ ಗಾಯಗೊಂಡು ಸ್ಥಳದಿಂದ ಓಡಿಹೋದಳು ಆದರೆ ಮೃತಳ ಕಾಲುಗಳು ಕಾರಿನಲ್ಲಿ ಸಿಲುಕಿಕೊಂಡವು. ನಂತರ ಕಾರ್ ಅವಳನ್ನು ಎಳೆದುಕೊಂಡು ಹೋಗಿದೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.
ಘಟನೆಯ ಬಗ್ಗೆ ಆಕ್ರೋಶ ಹೆಚ್ಚುತ್ತಿದ್ದಂತೆ, ಗೃಹ ಸಚಿವ ಅಮಿತ್ ಶಾ ಅವರ ನಿರ್ದೇಶನದ ಮೇರೆಗೆ ಕೇಂದ್ರ ಗೃಹ ಸಚಿವಾಲಯವು ದೆಹಲಿ ಪೊಲೀಸರಿಂದ ವಿವರವಾದ ವರದಿಯನ್ನು ಕೇಳಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದೆಹಲಿ ಪೊಲೀಸರು ವಿಶೇಷ ಆಯುಕ್ತ ಶಾಲಿನಿ ಸಿಂಗ್ ನೇತೃತ್ವದ ತನಿಖಾ ಸಮಿತಿಯನ್ನು ಸಹ ರಚಿಸಿದ್ದಾರೆ ಮತ್ತು ಸಾಧ್ಯವಾದಷ್ಟು ಬೇಗ ತನಿಖೆಯ ವರದಿಯನ್ನು ಸಲ್ಲಿಸುವಂತೆ ಅವರಿಗೆ ಸೂಚಿಸಿದ್ದಾರೆ ಎಂದು ಅವರು ಹೇಳಿದರು.
ಪ್ರಕರಣದ ಎಲ್ಲಾ ಐವರು ಆರೋಪಿಗಳನ್ನು ಸೋಮವಾರ ಮೂರು ದಿನಗಳ ಪೊಲೀಸ್ ಕಸ್ಟಡಿಗೆ ಕಳುಹಿಸಲಾಗಿದೆ.
ಭಾನುವಾರ ಮುಂಜಾನೆ ಸ್ಕೂಟಿಯಲ್ಲಿ ಚಲಿಸುತ್ತಿದ್ದ ಯುವತಿಗೆ ಡಿಕ್ಕಿ ಹೊಡೆದು ಯುವತಿ ಕಾರಿಗೆ ಸಿಲುಕಿಕೊಂಡಿದ್ದಳು. ಅವಳನ್ನು ಕಾರು 12 ಕಿಲೋ ಮೀಟರ್ ವರೆಗೆ ಎಳೆದೊಯ್ಡಿದ್ದರಿಂದ ಸಾವನ್ನಪ್ಪಿದ್ದಳು.
ಮೇಲ್ನೋಟಕ್ಕೆ ಆರೋಪಿಗಳು ಘಟನೆಯ ವೇಳೆ ಪಾನಮತ್ತರಾಗಿದ್ದರು ಎಂದು ಶಂಕಿಸಲಾಗಿದ್ದು ಅದರ ಪತ್ತೆಗೆ ರಕ್ತದ ಮಾದರಿಗಳನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗಿದೆ.